Monday, December 2, 2013

ಮಹಾ ಮರ್ಕಟಾಭೀಷೇಕ!!

ಬಹಳ ದಿನಗಳ ನಂತರ ಮನೆಯಿಂದ ಕರೆ ಬಂದಿತ್ತು..! "ಯಾವಾಗ ಮನೆಗೆ ಬರುತ್ತೀಯಾ? ಆಗಲೇ ೩ ತಿಂಗಳಾಯಿತು" ಎಂದು ಅಮ್ಮನ ಪ್ರಶ್ನೆ. ಊರೂರು ಸುತ್ತಿ ರಜೆ ಖಾಲಿಯಾಗಿತ್ತು. ರಜೆಗಾಗಿ ಕಾಯುವುದಕ್ಕೂ, ಆಫೀಸಿನಲ್ಲಿ ಹಟಾತ್ತಾಗಿ ನಾಲ್ಕು ದಿನ ರಜೆ ಸಿಗುವುದಕ್ಕೂ ಸರಿಯಾಗಿ, ಬೆಳಗ್ಗಿನ ಬಸ್ ಹತ್ತಿ ಊರಿಗೆ ನಡೆದಿದ್ದೆ. ಮನೆಯ ತಲುಪುವ ಮುನ್ನವೇ ಚಳಿಗಾಲದ ಆಗುಂಬೆ ಮನಸ್ಸಿನಲ್ಲಿ ಇಬ್ಬನಿಯ ಹಗುರವಾದ ಭಾವ ತುಂಬಿ ಮನೆಯ ಕೆಂಪುಮಣ್ಣಿನ ಹಸಿರು ಇಕ್ಕೆಲದ ಕಾಲುದಾರಿಯನ್ನು ಪದೇ ಪದೇ ನೆನೆಸುತಾ, ಮನೆಯನ್ನು ಯಾವಾಗ ತಲುಪುವೆನೋ ಎಂದು ಮನಸ್ಸು ಹಪಹಪಿಸುತ್ತಿತ್ತು. ಅಂತೂ ಇಂತೂ ಪ್ರಯಾಸದ ಪ್ರಯಾಣದ ಮಧ್ಯೆ ಬಾಲ್ಯದ ಗೆಳೆಯರು ಹಾಗೂ ಶಿಕ್ಷಕರನ್ನು ಬೆಟ್ಟಿಯಾಗಿ ಪಾನಿಪೂರಿಯ ಸವಿಯನ್ನು ತೀರ್ಥಹಳ್ಳಿಯಲ್ಲಿಯೇ ಸವಿದು, ಊರಿನ ಬಸ್ ಹತ್ತಿ ಮನೆಗೆ ತಲುಪುವಾಗ ಸಂಜೆ ೮ ಘಂಟೆ.
ಅಂಗಳಕ್ಕೆ ಕಾಲಿಡುತ್ತಲೇ ಅಡಿಕೆ ಸುಲಿತದ ದೃಶ್ಯ.. ಆದರೆ ಈ ಸಾರಿಯದ್ದು ಒಂದು ತರಹ ಬೇರೆಯದೇ ರೀತಿ, ಬೆರಳೆಣಿಕೆಯ ಜನ, ಮಾತಿಲ್ಲದ ನೀರವ ಮೌನ!!  ಮೊದಲೆಲ್ಲ ಅಂತಳದ ಆ ತುದಿಯಿಂದ ಈ ಮೂಲೆಯವರೆಗೂ ಎತ್ತ ಕಣ್ಣು ಹಾಸಿದರೂ ಜನವೋ ಜನ, ಗಲಾಟೆಯೋ ಗಲಾಟೆ!! ಕಿವಿಗೆ ಕಿಚಿ ಕಿಚಿ ಎನ್ನಿಸುವ ಅಡಿಕೆ ಸಿಪ್ಪೆ ಸುಲಿಯುವ ಚರ್ರ್ ಪರ್ರ್ ಎನ್ನುವ ಮನಕ್ಕೆ ಕಚಗುಳಿ ಇಡುವ ಹಿತವಾದ ಸದ್ದು. ಒಂದಷ್ಟು ಕೆಲಸಗಾರರ ಯಕ್ಷಗಾನದ ಪದಗಳು, ಇನ್ನೊಂದಷ್ಟು ಮಂದಿಯ ಜನಪದ ಹಾಡುಗಳು. ಅಡಿಕೆ ಸುಲಿತ ಮಲೆನಾಡಿಗರಿಗೆ ಒಂದು ತೆರನಾದ ಹಬ್ಬ ಇದ್ದಂತೆ! ಈಗಲೋ ಇರುವ ಯುವಕರೆಲ್ಲ, ಕೃಷಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ಪಟ್ಟಣದಲ್ಲಿ ಕೆಲಸ ಗಿಟ್ಟಿಸಿದ್ದರು.

ಜಗಲಿಗೆ ಧಾವಿಸುತ್ತಲೆ ಅಪ್ಪ ಹಾಗೂ ರಜನಿ(ಅಮ್ಮ) ಎದುರು ಬದುರು ಕುಳಿತು ಗೋಟಡಕೆಯನ್ನು ಸುಳಿಯುತ್ತಿದ್ದರು. ನೋಡಿದಾಕ್ಷಣ ಅವರು, "ಓಹೋಹೋ, ರಕ್ಷಿತ್ ಮಹಾರಾಜರು ಬರಬೇಕು, ಇತ್ತ ಧಾವಿಸಬೇಕು" ಎಂದು ರಜನಿ ನನಗೆ ಕಿಚಾಯಿಸಿದಳು. ನಾನು ಸುಮ್ಮನಿರದೆ, ಏನು ಅಪ್ಪನ ಎದುರಿಗೆ ಕುಳಿತು ಲೈನ್ ಹೊಡೀತಾ ಇದೀಯಾ ಅಂತ ತಿರುಗಿ ಕೆಣಕಿದೆ. ಸುಮ್ಮನೆ ಕುಳಿತಿದ್ದ ಅಪ್ಪ, "ಹೋಗಿ ಲುಂಗಿ ಉಟ್ಟು ಬಾ, ಗೋಣಿ ಚೀಲ ಕತ್ತಿ ರೆಡಿ ಇದೆ, ಮಾತು ಕಮ್ಮಿ ಮಾಡಿ ಅಡಿಕೆ ಸುಲಿ, ಎಂದಾಕ್ಷಣ ಮನೆಗೆ ಕರೆದ ಒಳಮರ್ಮ ಅರ್ತವಾಗಲು ನನಗೆ ಹೆಚ್ಚು ಸಮಯ ಹಿಡಿಯಲಿಲ್ಲ" ಎನ್ನಿ.

ಅಪ್ಪನ ಆಣತಿಯಂತೆ, ಮುಖ ತೊಳೆದು ಬೆಲ್ಲದ ಚಾ (ಅಡಿಕೆ ಸುಲಿತದ ಸ್ಪೆಷಲ್ ಟೀ) ಕುಡಿದು ಅಡಿಕೆ ಕತ್ತಿ ಗೋಣಿ ರೆಡಿ ಮಾಡಿ ಅಡಿಕೆ ಸುಳಿಯಲಿ ಅಪ್ಪ ರಜನಿಯ ಮಧ್ಯೆ ಕುಳಿತೆ. ನಿಧಾನವಾಗಿ ಹತ್ತು ಅಡಿಕೆ ಸುಳಿಯುತ್ತಲೆ, ಬೇಸರವಾಗಿ ಮಾತಿಲ್ಲದೆ ಕೂರಲಾಗಿ ಮೊದಲೆಲ್ಲ ದಯ್ಯದ (ದೆವ್ವ) ಕಥೆ ಹೇಳಿ ಮನದೊಳಗೆ ನಡುಕ ತರಿಸುತ್ತಿದ್ದ ಕೆಲಸದಾಳೊಬ್ಬನ ಹತ್ತಿರ, "ಏ ತಮ್ಮಣ್ಣ, ಒಂದು ದಯ್ಯದ ಕಥೆ ಹೇಳು ಮಾರಾಯ, ಕೆಳಾಣ" ಎಂದು ಭಿನ್ನವಿಸಿದೆ. ಪಕ್ಕದಲ್ಲೇ ಕುಳಿತಿದ್ದ ರಜಿನಿ, ಈಗ ದಯ್ಯ ಗಿಯ್ಯ ಏನು ಇಲ್ಲ ಮಾರಾಯ, ಎಲ್ಲ ಊರು ಬಿಟ್ಟು ಓಡಿಯೇ ಹೋಗಿದ್ದಾವೆ", ಎನ್ನಲು. ಕಾರಣ? ಎಂದು ನಾ ಕೇಳಿದೆ.
ಕೆಳಗೆ ಕುಳಿತಿದ್ದ ಮಂಜುನಾಥ, ಕೋಪೋದ್ರಿಕ್ತ ನಾಗಿ, "ಅಯ್ಯ, ಈ ಬ್ಯಾವರ್‌ಸಿ ಮಂಗಗಳನ್ನು ಫಾರೆಸ್ಟರ್‌ಗಳೆಲ್ಲ ಸೇರಿ, ಆಗುಂಬೆ ಕಾಡು ದೊಡ್ಡದು ಅಂತ ಇಲ್ಲಿ ಬಿಟ್ಟು ಹೋಗಿದ್ದಾರೆ. ಅವು ಬಂದಮೇಲೆ ದಯ್ಯ ಅಲ್ಲ ದೇವರೂ ನಮ್ಮೂರಲ್ಲಿ ಇರುವುದೋ ಬಿಡುವುದೋ ಅಂತ ಯೋಚನೆ ಮಾಡುತ್ತಿವೆ" ಎಂದ.
ಅದಕ್ಕೆ ನಾನು, ಯಾಕಪ್ಪಾ ನಿನಗೇನು ಮಾಡಿದವು ಅವು ಅಂತ ಕೇಳಲು, "ಅಯ್ಯ, ನಮ್ಮನೇಲಿ ಏನು ಅಡುಗೆ ಮಾಡಿದರೂ ಅದು ಮಂಗಕ್ಕೆ ಸಾಲುವುದಿಲ್ಲ. ಭಯಂಕರ ಲೂಟಿ ಮಾರ್ರೆ.. ಅದೆಷ್ಟೇ ಬಂದೈಬಸ್ತು ಮಾಡಿದರೂ, ನಮಗೂ ಮೀರಿ ಬುದ್ಧಿ ಉಪಯೋಗಿಸಿ ಪಾತ್ರೆಯನ್ನು ಬಿಚ್ಚಿ ಊಟ ಮಾಡ್ತವೆ. ಅದಷ್ಟೇ ಅಲ್ಲದೆ, ನಮ್ಮ ಯಂಕುಗೆ ಎರ್ಡು ಬಾರ್ಸಿ ಹೋಗ್ಯವೆ ಸೂಳೆ ಮುಂಡೇವು" ಎಂದ ಕೋಪದಿಂದ.
ಪಕ್ಕದಲ್ಲೇ ಕುಳಿತ ಅಪ್ಪ, "ಹೌದು ಮಾರಾಯ, ಮುಂದಿನ ಸಾರಿ ಗದ್ದೆ ಮಾಡುವುದಿಲ್ಲ.. ಈ ಮಂಗನ ಕಾಯುವುದೇ ಎರಡಾಳು ಹೆಚ್ಚಿನ ಕೆಲಸ. ಅವು ಬೇರೆ ಇತ್ತೀಚೆಗೆ ಭಾರೀ ಬುದ್ಧಿವಂತವಾಗಿವೆ. ಮೊದಲಿನ ಗುಂಡು ಹಾರಿಸಿದರೆ ಹೆದರುವುದಿಲ್ಲ. ನಮ್ಮ ತಮ್ಮಣ್ಣ ಒಂದು ಮಂಗ ಹೊಡೆದೂ ಗದ್ದೆಯ ಮರಕ್ಕೆ ನೇತು ಹಾಕಿಯೂ, ಅವಕ್ಕೆ ಭಯ ಬರಲಿಲ್ಲ. ರೈತ ಜನ್ಮ ಮಹಾ ಹಿಂಸೆ". ಎಂದರು.
ನಾನು ಅದಕ್ಕೆ, "ಅಪ್ಪ, ಮಂಗನನ್ನು ಹೊಡೆದರೆ ಪ್ರಾಣಿ ದಯಾ ಸಂಘದವರು ಗಲಾಟೆ ಮಾಡಿಯಾರು ಹುಷಾರ್ ಎನ್ನಲು, ಕೆಳಗೆ ಕುಳಿತ ತಮ್ಮಣ್ಣ, "ಯಾವ್, ದಯಾಸಂಘ, ಕರ್ಕು ಬಳ್ಳಿ ಅವನ್ನ, ಇಲ್ಲಿ ಬಂದು ಅವರ ಅಜ್ಜಂದ್ರನ್ನ ಕಾಯಲಿ ಬಡ್ಡಿ ಮಕ್ಕಳು" ಎಂದ ಕೋಪದಿಂದ.




ಕೊನೆಗೆ ನಾನೇ ನನ್ನ ಹಳೆಯ ಟ್ರಿಪ್ ಒಂದರಲ್ಲಿ ನೋಡಿದ ಅನುಭವವನ್ನ ಹಂಚಿಕೊಂಡೆ.
ತಮ್ಮಣ್ಣ, ಮಂಜುನಾಥ ಇದನ್ನ ಕೇಳಿ.. ಈ ಅಸ್ತ್ರ ಮಂಗನ ಮೇಲೆ ಪ್ರಯೋಗಿಸಿದರೆ ಏನಾದರೊಂದು ಆಗಬಹುದು. ನಾನು ೨ ವರ್ಷದ ಹಿಂದೆ ಮೇಕೆದಾಟು ಜಲಪಾತಕ್ಕೆ ಹೋದ ಸಮಯ. ಜಲಪಾತದ ಸನಿಹ ಒಂದಷ್ಟು ಪಡ್ಡೆ ಹೈಕಳು ಮೀನು ಹಿಡಿಯಾತ್ತಾ ಇದ್ದರೂ. ಪಕ್ಕದಲ್ಲೇ ಇದ್ದ ದಂಡೆಯ ಮೇಲೆ ಒಂದು ಥಮ್ಸ್ ಅಪ್ ಬಾಟಲ್ ಹಾಗೂ ಒಂದಸ್ತು ಕುರುಕುರು ತಿಂಡಿ. ಯಥಾ ಪ್ರಕಾರ ನಮ್ಮೂರಿನಂತೆಯೆ ಮಂಗನ ಕಾಟ. ಎರಡು ಗಡವಾ ಮಂಗಗಳು, ಹಟಾತ್ತನೆ ಥಮ್ಸ್ ಅಪ್ ಹಾಗೂ ತಿಂಡಿಯ ಮೇಲೆ ಧಾಳಿ ಮಾಡಿದವು. ತಿಂಡಿಯನ್ನೇನೋ ತಿಂದವು ಆದರೆ ಬಾಟಲಿ ಬಿಚ್ಚುವುದೇ ಒಂದು ಸಾಹಸದ ಕೆಲಸವಾಯ್ತು ಅವಕ್ಕೆ.
ಅಂತೂ ಇಂತೂ ಮರದಿಂದ ಬಾಟಲಿ ಕೈತಪ್ಪಿ ಕೆಳಗೆ ಬೀಳಲು ಮುಚ್ಚಳ ತೆರೆಯಿತು.. ನಾನೋ ನೀನೋ ಎಂದು ಎರಡೂ ಮಂಗಗಳು ಥಮ್ಸ್ ಅಪ್ ಕೂಡಿದವು. ಹತ್ತು ನಿಮಿಷ ಮರದಲ್ಲೇ ಸರ್ಕಸ್ ಮಾಡಿ, ಇದ್ದಕ್ಕಿದ್ದಂತೆ ೫ ನಿಮಿಷ ಸುಮ್ಮನೆ ಕುಳಿತವು.. ಆಮೇಲೆ ಕೇಳಪ್ಪ ಏನಾಯ್ತು ಅಂತ..!
"ಏನಾಯ್ತಯ್ಯ" ಎಂದರು ತಮ್ಮಣ್ಣ ಮಂಜುನಾಥ ಒಕ್ಕೊರಳಿನಿಂದ!!

ಎರಡೂ ಮಂಗಗಳು ಸಮಾ ಒಂದಕ್ಕೊಂದು ಕೊಟ್ಟುಕೊಂಡವು ಮಾರಾಯ. ಮಕಾ ತಿಕ ಎಲ್ಲಾ ಗಾಯ! ಆಮೇಲೆ ಸುಸ್ತಾಗಿ ಅಲ್ಲಿಂದಲ್ಲೇ ಕಂಬಿಕಿತ್ತವು!!

ಮಂಜುನಾಥ ಇದ್ದವ.. ಹಾಂಗಾರೆ ಥಮ್ಸ್ ಅಪ್ ಕೊಡಿಸ್ಬೇಕಾ ಈ ಮುಂಡೇವಕ್ಕೆ? ನಾನೇ ಕುಡಿದಿಲ್ಲ ಇವಕ್ಕೆ ಬೇರೆ".

ಅದಕ್ಕೆ ನಾ ಹೇಳಿದೆ. "ಅಲ್ಲ ಮಾರಾಯ. ಆ ಪಡ್ಡೆ ಹುಡುಗ್ರು ಬಿದ್ದು ಬಿದ್ದು ನಗಾಡ್ತಾ ಇದ್ರು. ಅಬ್ರು ಮೀನು ಫ್ರೈ ಮತ್ತೆ "ರಂ" ಹೊಡೆಯೋಕೆ ಅಂತ ಥಮ್ಸ್ ಅಪ್ ಬಾಟಲಿ ಒಳಗೆ 'ರಂ' ಮಿಕ್ಸ್ ಮಾಡಿದ್ದ್ದರಂತೆ! ಈ ಮಂಗಗಳು ಗೊತ್ತಿಲ್ಲದೆ ಕುಡಿದು ಕಿಕ್ಕಲ್ಲಿ ಚೆನ್ನಾಗೇ ಕೊಟ್ಕೊಂಡಿವೆ. ಅಷ್ಟೇ"

ಮಂಜುನಾಥ ತಮ್ಮಣ್ಣ ಇಬ್ಬರೂ ಜೋರಾಗಿ ನಕ್ಕು, ಈ ಬಾರಿ, ಮಂಗಗಳಿಗೆ ಎಣ್ಣೆ ಹೊಡೆಸೋದಂತೂ ಗ್ಯಾರಂಟಿ! ಅಂತ ಪ್ರತಿಜ್ಞೆ ಮಾಡಿದ್ದಾರೆ. ತಮ್ಮಣ್ಣ ಸ್ವತಹ ಎಣ್ಣೆ ಪ್ರೇಮಿ, ಎಷ್ಟು ಅವನ ಪಾಲೊ, ಎಷ್ಟು ಮಂಗನ ಪಾಲೊ ದೇವರೇ ಬಲ್ಲ. ಇಷ್ಟಾದ ಮೇಲೆ ಮಂಗಗಳೇ ಗಲಾಟೆ ಮಾಡಿಕೊಳ್ತವೋ, ಇವರಿಬ್ಬರಿಗೆ ಒದ್ದು ತಿಂಡಿ ಮಾಡಿಸಿಕೊಳ್ತವೋ ಅದು ಆ ಆಂಜನೆಯಂಗೆ ಗೊತ್ತು!!

ಜೈ ಹನುಮಾನ್, ನಿನ್ನ 'ಕುರ್ಪಾ' ಕಟಾಕ್ಷ ರೈತರ ಮೇಲೆ ಸಲ್ಪ ಕಡಿಮೆ ಮಾಡು ತಂದೆ ;)

1 comment:

  1. Very nice rakshas.... ninna bhashe first class.. 'malegalalli madumagalu' odida nenapayithu. Thank u. Keep writing more

    ReplyDelete