Friday, January 2, 2015

ಪಾಠ..

೨೦೧೪ ಕಳೆದು ೨೦೧೫ ಶುರು ಆಯಿತು. ಆಗಲೇ ಜನವರಿ ೨ನೇ ತಾರೀಖು. ಫ್ರೆಂಡ್ ಒಬ್ಬಳ 'ಹೊಸ ವರ್ಷದ ಶುಭಾಶಯಗಳು. ನಿನ್ನೆಲ್ಲಾ ಆಸೆ ಆಕಾಂಕ್ಷೆಗಳು ಈ ವರ್ಷ ಪೂರ್ಣವಾಗಲಿ' ಎಂಬ ಸಂದೇಶ ವ್ಹಾಟ್ಸಾಪ್ ನಲ್ಲಿ ಮಿನುಗಿತ್ತು. ತಿರುಗಿ ಅದಕ್ಕೆ ಧನ್ಯವಾದ ತಿಳಿಸಿ ಕಳೆದ ವರ್ಷದ ಕಹಿ ನೆನಪಿಗೆ ಜಾರಿದ್ದೆ. ಆಕಾಂಕ್ಷೆ ಆಸೆಗಳೆಲ್ಲವೂ 'ಅವಳೇ' ಅಂತ ದಿನ ರಾತ್ರಿ ಹತ್ತು ಹಲವು ರೀತಿಯಲ್ಲಿ ಅರ್ಥ ಮಾಡಿಸಿದ್ದ ನನ್ನ ಪ್ರಯತ್ನ ವ್ಯರ್ಥವಾಗಿತ್ತು. ತುಂಬಾ ಇಷ್ಟ ಪಟ್ಟು, ಮನೆಯಲ್ಲಿ ಪೆಪ್ಪರ್ಮೆಂಟು ತಿನ್ನಲು ಕೊಟ್ಟ ಹಣ ಉಳಿಸಿ ಕೊಂಡು ಓದುತ್ತಿದ್ದ ಚಂದಾಮಾಮ, ಚಂಪಕ, ಬಾಲಮಂಗಳ, ದಿನಕ್ಕೊಂದು ಕಥೆ ಪುಸ್ತಕಗಳನ್ನು ಕೊಂಡು ಒಂದೇ ರಾತ್ರಿಗೆ ಅಷ್ಟೂ ಕಥೆಗಳನ್ನು ಹೇಗೆ ಓದಿ ಮುಗಿಸುತ್ತಿದ್ದೆನೋ ಅದಕ್ಕೂ ಚುರುಕಾಗಿ ಅವಳನ್ನು ಹಚ್ಚಿಕೊಂಡಿದ್ದೆ. ಬರೀ ಒಂದು ವರ್ಷದಲ್ಲಿ ನನಗೆ ಅರ್ಥವಾದದ್ದು, ಅವಳು ನಾ ಇಷ್ಟ ಪಟ್ಟ 'ದಿನಕ್ಕೊಂದು ಕಥೆ' ಅಲ್ಲವೆಂದು. ಅವಳಾಗಿದ್ದಳು ನಾ ಓದಲು ಇಚ್ಚಿಸಿಯೇ ಇರದ 'ಜೀವನಕ್ಕೊಂದು ಪಾಠ'!
ನಾ ಸಣ್ಣಲ್ಲಿ ತುಂಬಾ ಹಠ ಮಾಡುತ್ತಿದ್ದ ಮಗು ಅಂತ ರಜಿನಿ ನನಗೆ ಹೇಳುವ ಅಗತ್ಯವಿರಲಿಲ್ಲ. ನನಗೆ ಅದು ಗೊತ್ತಿತ್ತು.. ರಜಿನಿಗೆ ನಾನು ಉಪ್ಪರಿಗೆಯಲ್ಲಿ ಮಲಗುತ್ತೇನೆ, ಕೆಳಗೆ ಮುಚಕಡೆಯಲ್ಲಿ ಮಲಗುತ್ತೇನೆ ಅಂತೆಲ್ಲ ಅದೆಷ್ಟು ಸಾರಿ ಹಾಸಿಗೆಯನ್ನು ಮೇಲೆ ಕೆಳಗೆ ಹೊರೆಸಿ ಆಟವಡಿಸಿದ್ದೇನೆ ಅನ್ನೋದು ಇನ್ನೂ ನೆನಪಿದೆ. ನೀಳ ಕಪ್ಪು ಉದ್ದ ತಲೆಕೂದಲನ್ನ ಕತ್ತರಿಸಿದಾಗ ನಾ ಮಾಡಿದ ಅಬ್ಬರಕ್ಕೆ ಮನೆಯ ಮುಚ್ಚಿಗೆಯೂ ಬಿರುಕು ಬಿಟ್ಟಿತ್ತಂತೆ. ನನ್ನ ಸ್ನಾನದ ಪಾಣಿಪಂಚೆಯನ್ನು ಅಪ್ಪ ಮುಟ್ಟಿದರೂ, ನನ್ನ ಸ್ಟಿಲ್ ಸೋಪಿನ ಬಾಕ್ಸ್‌ನ್ನು ಮನೆಗೆ ಬಂದ ನೆಂಟರು ಮುಟ್ಟಿದರೂ ಮುಗಿದೇ ಹೋಯಿತು! ಅದೆಂತ ಹಠ ನನ್ನದು.
ನಾ ಶಾಲೆಗೆ ಹೋಗಲು ಶುರುಮಾಡಿದಾಗ ಯಮಹಾ ಬೈಕಿನಲ್ಲಿ ಅಪ್ಪ ಬಂದು ಕರೆದುಕೊಂಡು ಹೋಗಲಿಲ್ಲ ಅಂತ, ನನ್ನನ್ನು ಹೆಗಲು ಮೇಲೆ ಕೂರಿಸಿಕೊಂಡು ಹೋಗಲು ಬಂದಿದ್ದ ನಮ್ಮನೆ ಕೆಲಸಕ್ಕೆ ಬರುವ ತಮ್ಮಣ್ಣನ ಮುಖವೆಲ್ಲ ಪರಚಿದ್ದೆ. ಪಾಪ ನನ್ನ ಹಠವನ್ನು ಅದೆಷ್ಟು ತಡೆದಿದ್ದನೋ ಆತ, ಇಂದಿಗೂ ಸಹ 'ರಕ್ಷಿತಯ್ಯ, ಅದೆಂಥಾ ಹಠನ್ರೀ ನಿಮ್ದು. ಬೇಕು ಅಂದರೆ ಬೇಕು.. ಅಬ್ಬರೇ! ನೀವು ಕೊಟ್ಟ ಗೋಳು ಯಾವತ್ತೂ ಮರೆಯುಕೇ ಆತದಾ"? ಅಂತ ಪಕ್ಕ ಮಲೆನಾಡು ಮಡಿವಾಳರ ಭಾಷೆಲಿ ಹೇಳಿದಾಗೆಲ್ಲ, 'ತಮ್ಮಣ್ಣ, ಅದು ಸಣ್ಣಕ್ಕಿರಬೇಕಾದ್ರೆ.. ಈಗ ಹಾಗಿದ್ದಿನಾ' ಅಂತ ನಾ ಅಂದರೆ ಆತ ನಕ್ಕು, 'ಆತು ಆತು.. ಈಗ ಒಂದು ಎಲೆ ಅಡಿಕೆ ಕೊಡಿ, ಸುಣ್ಣ ಹೊಗೆಸೊಪ್ಪು ಚೂರು ಜಾಸ್ತಿ ಹಾಕ್ಕೋಡಿ'. ಅಂದು ಅವತ್ತಿನ ಕಾಟಕ್ಕೆ ಇವತ್ತು ಮುಲಾಮು ಹಾಕಿಸಿಕೊಳ್ಳುತ್ತಾನೆ.
ಇದೆ ಹಠಕ್ಕೆ ಅನಿಸುತ್ತದೆ ಅಪ್ಪ ನನಗೆ ತೀರಾ ಹೊಡೆಯುತ್ತಿದ್ದುದು. ಒಮ್ಮೆ ತೋಟಕ್ಕೆ ಬರುತ್ತೇನೆ ಅಂತ ದುಂಬಾಲು ಬಿದ್ದಾಗ, ಕರೆದುಕೊಂಡು ಹೋಗಿ ಅಡಿಕೆ ಹಾಳೆಯಲ್ಲಿ.. ಮತ್ತೊಮ್ಮೆ ಪೆನ್ನು ಬರೆಯಲ್ಲ ಅಂತ ಅದನ್ನ ನೆಲದ ಮೇಲೆ ಗೀಚಿದಾಗ ಕೋಪಗೊಂಡ ಅಪ್ಪ ಮೊಸರು ಕಡೆಯುವ ಕುಡುಗೋಲು ಹಗ್ಗದಲ್ಲಿ ೮ ವರ್ಷದ ನನ್ನ ಬೆನ್ನನ್ನು ಸುಲಿದಿದ್ದರು.. ಮಧ್ಯೆ ಬಂದು ಅಜ್ಜಿ, ನಿನಗೆ ಮಕ್ಕಳೆಂದರೆ ಅರ್ಥವೇ ಗೊತ್ತಿಲ್ಲವೇ ಎಂದಾದ್ದು ನೆನೆದಾಗ ಇಂದು ಸಹ ಕಂಗಳು ತುಂಬುತ್ತವೆ. ಅಜ್ಜಿ ನನ್ನನು ಅದೆಷ್ಟು ಹಚ್ಚಿಕೊಂಡಿದ್ದಳು. ನನಗೆ ಪೆಟ್ಟು ಬಿದ್ದಾಗಲೆಲ್ಲ, ಅಪ್ಪಿ ಕಾಪಾಡಿದ್ದು ನೆನೆಸಿಕೊಂಡರೆ ಹೇಳಲಿಕ್ಕಾಗದ ಒಂದು ತೃಪ್ತಿ. ಮಾನವೀಯತೆ, ಸಂಬಂಧಗಳು ಇದಕ್ಕೆಲ್ಲ ಎಷ್ಟು ಬೆಲೆಯಿತ್ತು ಅಂತಾನಿಸುತ್ತದೆ. 
ಇಂದು ಕೂತು ಯೋಚಿಸಿದಾಗ, ಅಪ್ಪ ಅಂದು ಹೊಡೆದದ್ದಕ್ಕೆ ಒಂದು ಅರ್ಥವಿತ್ತು. ಅವತ್ತು ಹೊಡೆದದ್ದು ಇವತ್ತು ನಾನು ಎಂದಿಗೂ ನನ್ನತನ ಕಳೆದುಕೊಳ್ಳಬಾರದು, ತಪ್ಪು ದಾರಿ ಮಾತ್ರವಲ್ಲದೆ, ತಪ್ಪು ವ್ಯಕ್ತಿಗಳನ್ನು ಹೃದಯಕ್ಕೆ ಎಂದಿಗೂ ಬಿಟ್ಟುಕೊಳ್ಳಬಾರದು ಎಂಬುದಷ್ಟೆಯೇ ಆಗಿತ್ತು.  ಅಂದು ಬಿದ್ದ ಬರೆ, ಬಾಸುಂಡೆಗಳ ನೋವು ಕಣ್ಣೀರಾಗಿ ಕೆನ್ನೆಯಪ್ಪಿ ಒಣಗುವುದರೊಳಗೆ ಮನಸ್ಸಿನ ನೋವು ಸಹ ಮಾಯ್ದು, ಅಪ್ಪನ ಮೇಲೆ ಅದೇ ಭಯ ಗೌರವ ಪ್ರೀತಿ ಉಕ್ಕುತ್ತಿತ್ತು.
ಜೀವನ ಕಲಿಸುವ ಪಾಠ ಅತಿ ಕ್ರೂರವಾದುದು.. ಅದು ತನ್ನ ಮಗನಿಗೆ ಬರಬಾರದು ಅಂತ ಅಪ್ಪ ಅಂದೇ ಯೋಚಿಸಿದ್ದರು ಅನಿಸುತ್ತೆ. ಅವತ್ತು ಅಷ್ಟು ಹೊಡೆದೂ ಬುದ್ಧಿ ಕಳಿಸಿದ್ಧರೂ ಒಂದು ವರ್ಷದ ಹಿಂದೆ, ಕಳೆದ ಒಂದು ವರ್ಷದ ಸಂಬಂಧ ಅವರು ಕಲಿಸಿದ್ದ ಪಾಠಕ್ಕೆ ಮಾಡಿದ ಅವಮಾನ ಅನ್ನುವುದು ಅವಳು ಸಾಬೀತುಪಡಿಸಿದ್ದಳು. ನಾನೇ ಎಲ್ಲ, ನನಗೆ ಸಮನಾದ ಹುಡುಗರಿಲ್ಲ.. ನಾನು ಬೆಳೆದು ಬಂದ ಕ್ರಮಕ್ಕೆ ತಕ್ಕದಾಗಿ ಯಾರೂ ಇಲ್ಲ, ನನ್ನ ಆಯ್ಕೆಯೇ ಅತ್ಯುತ್ತಮ ಅಂತ ಬೀಗುತ್ತಿದ್ದ ನನಗೆ ಜೀವನ ಕೊಟ್ಟ ಏಟು ಅಪ್ಪನ ಹೊಡೆತದಂತೆ ಬೆನ್ನಿನ ಮೇಲೆ ಬಾಸುಂಡೆ, ತೊಡೆಯ ಮೇಲೆ ಕಲೆ ಉಳಿಸಲಿಲ್ಲ.
ಹೃದಯವನ್ನೇ ಸುಟ್ಟು, ಜೀವನದ ಪಾಠ ಕ್ರೂರ ಅನ್ನುವುದು ಸಾಬೀತುಪಡಿಸಿತ್ತು. ಹುಡುಗಿ ನನ್ನಂತೆಯೇ ಇನ್ನೊಬ್ಬನ ಕೈ ಹಿಡಿದು ಕಿಲ ಕಿಲ ನಗುತ್ತಾ ನನ್ನ ಪಕ್ಕವೇ ನಡೆದು ಹೋಗಿದ್ದಳು.. ಇವತ್ತು ಸಮಾಧಾನ ಪಡಿಸಲು ಅಜ್ಜಿ, ಅಪ್ಪ, ಅಮ್ಮ ಯಾರೂ ಜೊತೆಯಿರಲಿಲ್ಲ.. ನಿಟ್ಟುಸಿರು ಮಾತ್ರ..  ವ್ಹಾಟ್ಸಪ್ನಲ್ಲಿ ಗೆಳತಿಗೆ, 'ನನ್ನ ಆಸೆಗಳು ಎಂದಿಗೂ ಅಪೂರ್ಣ' ಅಂತ ಸುದ್ಧಿ ರವಾನಿಸಿದ್ದೆ.

Monday, December 8, 2014

ಮುಸುಕು...

ಮಾಗಿಯ ಛಳಿಯ ಆ ದಿನ. ಚಳಿ ಅನ್ನುವುದು ಸರಿಯಾದ ಕನ್ನಡ ವ್ಯಾಕರಣ ಅಲ್ಲವೇ? ಇಲ್ಲಿ ಛಳಿ ಅಂತ ಉಪಯೋಗಿಸುವುದಕ್ಕೂ ಒಂದು ಕಾರಣವಿದೆ. ಆಂಗ್ಲ ಭಾಷೆಯಲ್ಲಿ ಸೂಪರ್ಲೇಟೀವ್ ಅನ್ನುವ ಬಳಕೆ ನಮ್ಮಲ್ಲಿ ಹಲವರಿಗೆ ಗೊತ್ತೇ ಇದೆ. ಇದಕ್ಕಿಂದ ಅದು, ಅದಕ್ಕಿಂತ ಇನ್ನೊಂದು ಮಹದಾದದ್ದು ಅಂತ ಹೋಲಿಕೆಗೆ ನಿಲ್ಲಿಸುವಾಗ ಭಾಷಾಪ್ರಯೋಗ ಬದಲಾಗುತ್ತದೆ. ಅದಕ್ಕೆ ಚಳಿ ಅನ್ನುವುದನ್ನು ಛಳಿ ಅಂತ ಇಲ್ಲಿ ಬರೆಯುತ್ತಿದ್ದೇನೆ. ಇಂಥ ಛಳಿಯ ಪ್ರಾರಂಭದ ಆ ರಾತ್ರಿ.
ಬೆಡ್ ರೂಮ್ ಮೂಲೆಯ ಕಿಟಕಿಯ ಬಾಗಿಲಿನಲ್ಲೊಂದು ಕುರುಡ (ಒಂದು ಜಾತಿಯ ಹುಳ) ತನ್ನ ಗೂಡು ಕಟ್ಟುವ ಅವಸರದಲ್ಲಿ ಬಾಗಿಲನ್ನು ಕೊರೆದು ಒಂದು ಚಿಕ್ಕ ತೂತು ಮಾಡಿತ್ತು, ಪಾಪ ಅದು ಚಿಕ್ಕ ಜೀವವಲ್ಲವೇ? ಅದಕ್ಕೂ ಛಳಿ ಆಗುವುದಿಲ್ಲವೇ? ತನ್ನದೂ ಒಂದು ಪುಟ್ಟ ಸುಂದರ ಸಂಸಾರಕ್ಕಾಗಿ ಆ ಪಟ್ಟಣದ ಬೃಹತ್ ಅಪಾರ್ಟ್ಮೆಂಟ್ ಎತ್ತರದ ಮಹಡಿಯ ಫ್ಲ್ಯಾಟ್ ಮೂಲೆಯ ಕಿಟಿಕಿಯ ಸಂದಿನಲ್ಲಿ ಬಾಗಿಲ ಕೊರೆದು ಮಣ್ಣು ಮರ ಸೇರಿಸಿ ಒಂದು ಚಿಕ್ಕ ಗೂಡು ಕಟ್ಟಿತ್ತು. ಮನೆಯಲ್ಲಿ ಬಾಡಿಗೆಗಿದ್ದ ಹುಡುಗನಿಗೆ ಇದರ ಅರಿವಿಲ್ಲ.. ಅವನ ಪ್ರಪಂಚವೇ ಬೇರೆ. ಕೆಲಸ ಮನೆ, ಮನೆ ಕೆಲಸ. ಮಧ್ಯದಲ್ಲೊಂದು ಗರ್ಲ್ ಫ್ರೆಂಡ್.. ಕೆಲಸ ಮುಗಿಸಿ ಮನೆಗೆ ಬಂದು, ಫೋನ್ ನಲ್ಲಿ ಹುಡುಗಿಯೊಂದಿಗೆ ಕಿತ್ತಾಡಿ, ಹಾಸಿಗೆಯ ನೋಡಿದರೆ ಸಾಕು, ಅಷ್ಟೇ ಅವನಿಗೆ ದಿನದಂತ್ಯ.
ಹಾಗೆ ಮಾಗಿಯ ಛಳಿಯ ಆ ರಾತ್ರಿ, ಮೈ ಕೈ ಎಲ್ಲ ಕೊರೆಯುವ ಚಳಿ. ಎಂದಿನಂತೆ ಗರ್ಲ್ ಫ್ರೆಂಡ್ ನೊಂದಿಗೆ ಅಂದೂ ಭಿನ್ನಾಭಿಪ್ರಾಯಗಳನ್ನು ತೋಡಿಕೊಂಡು, ನಂತರ ಬೆಚ್ಚಗಿನ ಸ್ವೆಟರ್, ಸ್ಕಾರ್ಫ್, ಶಾಲು ಎಲ್ಲವೂ ಧರಿಸಿ ತನ್ನ ನಲ್ಮೆಯ ಮಂಚವೇರಿದ್ದಾನೆ. ದಪ್ಪದ ಬ್ಲ್ಯಾಂಕೆಟ್ ಹೊದ್ದು ಕಣ್ಣು ಮುಚ್ಚ್ಚಿದ. ಇನ್ನೇನು ನಿದ್ದೆ ಮಾಡಬೇಕು ಅನ್ನುವಷ್ಟರಲ್ಲಿ ಕಿಟಕಿಯ ಬಾಗಿಲ ಸಂದಿನಿಂದ ಬೀಸಿತು ಕುಳಿರ್ಗಾಳಿ. ಕಿಟಿಕಿಯಿಂದ ಸುಳಿದ ತುಣುಕು ಗಾಳಿ ಕಿವಿಯಿಂದ ನುಗ್ಗಿ, ಇನ್ನೇನು ಸ್ವಪ್ನ ಲೋಕಕ್ಕೆ ಲಗ್ಗೆ ಇಡಲು ಹಪಹಪಿಸುತ್ತಿದ್ದ ಅವನ ಸುಪ್ತ ಮನಸ್ಸನ್ನು ಸ್ವಗತಕ್ಕೆ ಮರಳಿಸಿತ್ತು. ಹುಡುಗನಿಗೆ ಎಲ್ಲಿಲ್ಲದ ಕೋಪ ಬಂತು, ಎಲ್ಲ ಬಾಗಿಲನ್ನು ಮುಚ್ಚಿ ಬಂದಿದ್ದೇನೆ, ಗಾಳಿ ಎಲ್ಲಿಂದ ಬರುತ್ತಿದೆ ಅಂತಲೇ ಅರ್ಥವಾಗುತ್ತಿಲ್ಲ. ಹಾಸಿಗೆಯಿಂದೆದ್ದು ಬೆಡ್ ರೂಮಿನ ಕಿಟಕಿಯ ಪರಿಶೀಲಿಸಾಲಾರಂಭಿಸಿದ, ಕಂಪ್ಯೂಟರ್ ಮಾನಿಟರ್ ನೋಡಿ ನೋಡಿ ಮೂವತ್ತು ಭಾಗ ದೃಷ್ಟಿ ಕಳೆದುಕೊಂಡಿದ್ದ ಆತನಿಗೆ, ಕುರುಡ ಹುಳ ಮಾಡಿದ ಆ ಚಿಕ್ಕ ನಾಜೂಕು ತೂತು ಕಾಣಲಿಲ್ಲ. ಕೋಪದಿಂದ ತೆರೆದಿದ್ದ ಕರ್ಟನ್ ಸರಿಸಿ ಮತ್ತೆ ಹೋಗಿ ಮಂಚದ ಮೇಲಿದ್ದ ಬೆಚ್ಚನೆಯ ಬ್ಲ್ಯಾಂಕೆಟ್ ಚೆನ್ನಾಗಿ ಮುಸುಗೆಳೆದು ಮಲಗಿದ. ಈ ಸಾರಿ ಕಿಟಕಿಯಿಂದ ಸುಳಿದ ಗಾಳಿ ಆತನನ್ನು ಸೋಕಲಿಲ್ಲ. ಚಳಿಯೂ ನಿಯಂತ್ರಣಕ್ಕೆ ಸಿಕ್ಕಿತ್ತು. ಆದರೆ ಏನೋ ಒಂದು ತರಹದ ಅಸಮಾಧಾನ! ಉಸಿರುಗಟ್ಟುತ್ತಿದೆ.. ಕತ್ತಲೆಯಿದೆ, ಬೆಚ್ಚನೆಯ ಅನುಭವ, ಏನೋ ಒಂದು ತರಹದ ಸುಖ ಅಂತ ಅನಿಸಿದರೂ ಸಹ ಉಸಿರುಗಟ್ಟುವ ಅನುಭವ ಹುಡುಗನನ್ನು ಕಾಡಹತ್ತಿತ್ತು. ಮುಸುಗು ಹಾಕಿ ಮಲಗದಿದ್ದರೆ ಹೊರಗಿನ ಚಳಿ, ಮುಸುಗು ಹಾಕಿ ಮಲಗಿದರೆ ಉಸಿರುಗಟ್ಟುವ ವಾತಾವರಣ. ಎನಾದರಾಗಲಿ ಉಸಿರುಗಟ್ಟಿ ಸಾಯುವ ಬದಲು, ಉಸಿರು ನೀಡುವ ತಂಗಾಳಿಯೊಂದಿಗೆ ಸೆಣಸುವ ಅಂತ ಹುಡುಗ ತೀರ್ಮಾನಿಸಿದ್ದ.


ಮುಸುಗನ್ನು ತೆಗೆದು ಕುಳಿರ್ಗಾಳಿಗೆ ಮುಖ ಕೊಟ್ಟು ಮಲಗಿದ್ದ. ಸ್ವಲ್ಪ ಹೊತ್ತು ಕೋಸರಾಡಿದರೂ ಸಹ ಉಳಿದ ರಾತ್ರಿ ಹಿತವಾಗಿ ನಿದ್ರಿಸಿದ್ದ.
ಬೆಳಿಗ್ಗೆ ಆರು ಘಂಟೆ, ಫೋನ್ ಅಲಾರಾಂ ರಿಂಗಣಿಸಿತ್ತು. ಎದ್ದು ಆಫ್ ಮಾಡುತ್ತಿದ್ದಂತೆಯೇ, ವ್ಹಾಟ್ಸಪ್ಪ್ ನೋಟಿಫಿಕೇಷನ್ ಕಡೆಗೆ ದೃಷ್ಟಿ ಹೊರಳಿತ್ತು. ಆತನ ಹುಡುಗಿಯ ಮೆಸೇಜ್ ಹೀಗಿತ್ತು, 'ನಿನಗೆ ನನಗಿಂತಲೂ ನಿನ್ನ ಕನಸುಗಳೇ ಮುಖ್ಯವಾದರೆ, ನನ್ನ ಮರೆತುಬಿಡಬಹುದು'. ಪ್ರತಿದಿನವೂ ಕಾಡಿ ಬೇಡಿ ಹುಡುಗಿಯನ್ನು ಸಮಾಧಾನಿಸುತ್ತಿದ್ದ ಹುಡುಗ ಇಂದು ಅವಳನ್ನು ತಡೆಯಲಿಲ್ಲ. ಉಸಿರುಗಟ್ಟಿಸುವ ಪ್ರೀತಿಗಿಂತ, ಒಂಟಿತನದ ಜೀವನವೇ ಆತನಿಗೆ ಲೇಸು ಅನಿಸಿತ್ತು. ಹಾಗಾಗಿಯೂ ಅವನು ಒಂಟಿ ಏನಲ್ಲ. ಅವನಲ್ಲಿ ಜಗತ್ತನೇ ಪ್ರೀತಿಸುವ ಕನಸುಗಳಿದ್ದವು, ಕನಸನ್ನು ಗೆಲ್ಲುವ ಛಲವಿತ್ತು, ಹಟವಿತ್ತು. ಹೊದ್ದಿಗೆ ತೆಗೆದು ಬಾತ್ ರೂಮಿಗೆ ನಡೆದ, ಪರದೆಗಟ್ಟಿದ ಮುಖ ಕಣ್ಣುಗಳ ಸ್ವಚ್ಛವಾಗಿ ತೊಳೆದ. ಕಣ್ಣಲ್ಲಿ ಮಿಂಚಿತ್ತು, ಮನಸ್ಸಲ್ಲಿ ಹುರುಪಿತ್ತು. ಫ್ರೆಶ್ ಆಗಿ ಬಂದು ಫೋನ್ ತೆಗೆದು ವ್ಹಾಟ್ಸಪ್ಪ್ ನಲ್ಲಿ ಅವಳಿಗೆ ಮರು ಉತ್ತರಿಸಿದ್ದ. 'Wish you good luck. I will live for myself, at least from NOW'.

 ಅಂದಿನಿಂದ ಆತ ನಿಜವಾಗಿಯೂ ಅವನಿಗಾಗಿಯೇ ಬದುಕಿದ್ದ. ಮುಸುಕಿನ ನಂಬಂಧವ ತೊರೆದು, ಸ್ವಚ್ಛಂದ ಕನಸಿನ ಲೋಕವ ನೈಜತೆಯ ಮಾಡುವ ಹೊಸ್ತಿನಲ್ಲಿ ಮನಸ್ಸನ್ನು ತಂದು ನಿಲ್ಲಿಸಿದ್ದ.

Saturday, November 22, 2014

ಕಿಸ್ ಆಫ್ ಲವ್

ಇದೊಂದು ವಿಚಾರ ಮನಸ್ಸಿನಲ್ಲಿ ಬಹಳ ದಿನದಿಂದ ನಿಂತ ನೀರಾಗಿತ್ತು. ಬರೆಯಲು ಯಾಕೋ ಗಳಿಗೆಯೇ ಕೂಡಿಬರಲಿಲ್ಲ. ಬರೆಯಲು ಒಂದು ರೀತಿಯ ಹುರುಪು ಬೇಕಾಗುತ್ತದೆ.. ಸುಮ್ಮ ಸುಮ್ಮನೆ ಬರೆದರೆ ಹಸಿವಿಲ್ಲದೆ ಊಟ ಮಾಡಿದಂತೆಯೇ. ಸೇರುವುದಿಲ್ಲ.
ನಾನು ಹೊಸತಾಗಿ ಕೆಲಸಕ್ಕೆ ಸೇರಿದಾಗ ನನ್ನ ಮೆನೇಜರ್ ಮಾತು ಹೇಳಿದ್ದು ಇವತ್ತಿಗೂ ನೆನಪಿದೆ. ನಾವು ೨೧ ದಿನಗಳ ವರೆಗೆ ಸತತವಾಗಿ ಏನು ಮಾಡುತ್ತೇವೋ ಅದರಲ್ಲಿ ನಾವು ಕೌಶಲ್ಯತೆ ಪಡೆಯುತ್ತೇವೆ ಅಂತ. ಬರೆವು ಅನ್ನುವುದನ್ನು ಮನಸ್ಸಿಗೆ ಹಚ್ಚಿಕೊಳ್ಳಲೇಬೇಕು ಅಂತ ತೀರ್ಮಾನಿಸಿ ವರ್ಷಗಳಾದರೂ, ಅದನ್ನು ಹವ್ಯಾಸಕ್ಕೆ ಸೇರಿಸಿ ತಿಂಗಳಂತೂ ಉರುಳಿದೆ. ಈಗೀಗ ಬರೆಯುವುದಕ್ಕೂ ಖುಷಿ ಎನಿಸುತ್ತದೆ. ಓದುವವರು ಮಾತ್ರ ಕಮ್ಮಿ.
ಹೋಗ್ಲಿ ಬಿಡಿ.. ವಿಷ್ಯಕ್ಕೆ ಬರುವ.
ಶನಿವಾರ ಇವತ್ತು, ಸಂಜೆ ಆಗಿದೆ ಕಾಫಿ ಕುಡಿಯೋ ಟೈಮಿಗೆ ನೀರು ಬಿಸಿಗೆ ಹಾಕಿ ಸ್ನಾನಕ್ಕೆ ಕಾಯುತ್ತಿದ್ದೇನೆ. ಊಟ ಮಾಡಲು ಆಸಕ್ತಿ ಇಲ್ಲ.. ಟೀ ವಿ ಚಾಲೂ ಮಾಡುತ್ತಲೇ ನ್ಯೂಸ್ ಚಾನೆಲ್ ಒಂದರಲ್ಲಿ 'ಕಿಸ್ ಆಫ್ ಲವ್ ಡೇ' ಅಂತ ಏನೋ ಮಾಡ್ಬೇಕು ಅಂತ ಯುವಜನರು ಯೋಚಿಸುತ್ತಿದ್ದಾರೆ, ಮತ್ತೆ ಅದಕ್ಕೆ ಸರ್ಕಾರದವರು ಅಡ್ಡಿಯಾಗಿದ್ದಾರೆ ಅಂತ ಏನೋ ಹೇಳ್ತಾ ಇದ್ದದ್ದು ಕೇಳಿ ವ್ಹಾಟ್ಸಾಪ್ ಮತ್ತೆ ಫೇಸ್ಬುಕ್ ನಲ್ಲಿ ಹಲವು ಬಾರಿ ಹಲವಾರು ಶೇರ್ ಮಾಡಿದ್ದ ವಿಚಾರವೊಂದು ನೆನಪಿಗೆ ಬಂತು. 'ಇಟ್ಸ್ ಓಕೇ ಟು ಪಿಸ್ ಇನ್ ಪಬ್ಲಿಕ್, ಬಟ್ ನಾಟ್ ಓಕೇ ಟು ಕಿಸ್ ಇನ್ ಪಬ್ಲಿಕ್'. ಅಂದರೆ ಸಾರ್ವಜನಿಕ ಪ್ರದೇಶದಲ್ಲಿ ಮೂತ್ರ ಮಾಡಬಹುದು, ಮುತ್ತು ಯಾಕೆ ಕೊಡಬಾರದು? ಹೌದಪ್ಪಾ.. ಸರಿಯಾದ ಮಾತು! ಉಚ್ಚೆ ಹೊಯ್ಯೋಕೆ ನಾಚಿಕೆ ಇಲ್ಲದವರು, ಮುತ್ತು ಕೊಡೋಕೆ ಯಾಕೆ ನಾಚಿಕೆ ಪಡಬೇಕು? ಅಲ್ವಾ? ಇಲ್ಲಿ ನಾನು ಪರ ಅಥವಾ ವಿರೋಧ ಪಕ್ಷ ವಹಿಸುತ್ತಿಲ್ಲ. ನೈಜತೆಯ ಬಗ್ಗೆ ಮಾತನಾಡೋಣ.



ಭಾರತೀಯ ಸಂಸ್ಕೃತಿಯಲ್ಲಿ ನಾನು ಹುಟ್ಟಿ ಬೆಳೆದು ತಿಳಿದು ಬಂದ ಹಾಗೆ ದಾರಿ ಬದಿಯಲ್ಲಿ ಮೂತ್ರ ಮಾಡಬೇಕು ಅಂತ ಏನು ಬರೆದಿಲ್ಲ.. ಮುತ್ತು ಕೊಡಬೇಕು ಅಂತಲೂ ಬರೆದಿಲ್ಲ. ಸಾರ್ವಜನಿಕವಾಗಿ ಮುತ್ತು ಕೊಡುವುದು ನಮ್ಮ ಸಂಸ್ಕೃತಿ ಖಂಡಿತ ಅಲ್ಲ. ನನಗೆ ತಿಳಿದ ಮಟ್ಟಿಗೆ ಅಮೇರಿಕ ಯುರೋಪ್ ಖಂಡಗಳಲ್ಲಿ ತರಹದ ಸಂಸ್ಕೃತಿ ಇದೆ. ಅದು ತಪ್ಪಲ್ಲ ಕೂಡ. ಅದು ಅವರು ಬೆಳೆದ ಸಂಸ್ಕೃತಿ. ಅಲ್ಲಿಯ ಸಂಸ್ಕೃತಿಯಲ್ಲಿ ತಂದೆ ತಾಯಿ ಮಕ್ಕಳನ್ನು ಸ್ವಾವಲಂಭಿಯಾಗಿ ಬೆಳೆಸಿಬಿಡುತ್ತಾರೆ.. ಮಗು ಹುಟ್ಟಿ ಸ್ವಲ್ಪೇ ತಿಂಗಳಲ್ಲಿ ಮೊಲೆ ಹಾಲನ್ನು ಬಾಟಲಲ್ಲಿ ಶೇಖರಿಸಿ ಮಕ್ಕಳಿಗೆ ಕುಡಿಸುವ ಮಟ್ಟಿಗೆ ತಾಯಿ ಮಗುವನ್ನು ಹುಟ್ಟಿನ ಶುರುವಿನಲ್ಲಿಯೇ ಸ್ವಾವಲಂಬಿಯಾಗಿ ಬೆಳೆಸುವ ಪ್ರಯತ್ನ ಮಾಡುತ್ತಾಳೆ. ಅದು ಮಗುವಿಗೆ ಎರಡು ಅಥವಾ ಮೂರು ವರ್ಷ ವಯಸ್ಸು ದಾಟುತ್ತಿದ್ದಂತೆಯೇ ಮಗುವನ್ನು ಅದರದೇ ಆದ ಒಂದು ಬೇರೆ ಕೊನೆಯಲ್ಲಿ ಒಂಟಿಯಾಗಿ ಮಲಗುವ ಅಭ್ಯಾಸ ಮಾಡಿಸುತ್ತಾಳೆ. ಮಗು ಮೊದ ಮೊದಲಿಗೆ ಹೆದರಿದರೂ ಹೋಗು ಹೋಗುತ್ತಾ ಅಭ್ಯಾಸ ಮಾಡಿಕೊಳ್ಳುತ್ತದೆ. ಅಪ್ಪ ಅಮ್ಮ ಅನ್ನುವ ಭಯವನ್ನು ಕಳೆದುಕೊಳ್ಳುತ್ತದೆ. ಅದಕ್ಕೆ ನಾನು ನಾನೇ, ಅವರಿಂದ ನಾನಲ್ಲ ಅನ್ನುವ ಭಾವ ಬೆಳೆಸಿಕೊಳ್ಳುತ್ತದೆ. ಕಿಸ್ ಹಾಗೂ ಸೆಕ್ಕ್ಶ್ ಅನ್ನುವುದು ತೀರಾ ಸ್ವಾಭಾವಿಕ ಅನ್ನುವುದು ಅವರ ತಂದೆ ತಾಯಿ ಸಮಾಜ ಬದುಕುವ ರೀತಿಯಿಂದ ಅರಿತುಬಿಡುವರು. ತೀರಾ ಬೇಡ ಅಂದರೂ ಸಹ ಮಕ್ಕಳು ತಲೆಕೆಡಿಸಿಕೊಳ್ಳುವುದಿಲ್ಲ, ಅವರ ದಾರಿಯನ್ನು ಅವರು ಹಿಡಿಡುಬಿಡುತ್ತಾರೆ. ಒಂದು ಮಟ್ಟಿಗೆ ಹೇಳುವುದಾದರೆ ಅವರಿಗೆ 'ನನ್ನವರು' ಅನ್ನುವ ನಂಟು ಅವರಿಗಿರುವುದಿಲ್ಲ. ಭಾವನಾತ್ಮಕವಾಗಿ ನಂಟು ಬೆಳೆಸಿಕೊಳ್ಳದ ಮಕ್ಕಳಿಗೆ ತಂದೆ ತಾಯಿಯನ್ನು ಕಳೆದುಕೊಂಡು ಜೀವನದ ಮುಂದಿನ ದಾರಿಯನ್ನು ಕಂಡುಕೊಳ್ಳುವುದು ಸುಲಭವೇ. ಅವರಲ್ಲಿ ಇಂಥ ಕೆಲಸ ಮೇಲು ಅಥವಾ ಕೀಳು ಅನ್ನುವುದಿಲ್ಲ. ಕಾಯಕವೇ ಕೈಲಾಸ ಅಂತ ಬಸವಣ್ಣನವರು ಭಾರತೀಯರಿಗೆ ಭೋಧಿಸಿದರೂ ಸಹ ಅಳವಡಿಸಿಕೊಂಡವರು ಅಲ್ಲಿಯ ದೇಶದವರು. ಒಂದು ಸಾರಿ ಕೆಲಸಕ್ಕೆ ಕುಳಿತರೆ ಸಮಯಕ್ಕೆ ಸೆಡ್ಡು ಹೊಡೆಯುವಂತೆ, ಬೆವರೂ ಕಲ್ಲಾಗಿ ಭಾರ ಪಡೆಯುವ ಹಾಗೆ ಕೆಲಸಕ್ಕೊಂಡು ಬೆಲೆಯನ್ನು ತಂದುಕೊಡುವರು. ಮೊನ್ನೆ ಮೊನ್ನೆಯಷ್ಟೇ ನನ್ನ ಸಹೋದ್ಯೋಗಿಗಳಿಬ್ಬರು ಅಮೆರಿಕಾದ ಫ್ರ್ಯಾಂಕ್ಲಿನ್ ಗೆ ಕೆಲಸದ ಮೇಲೆ ಹೋಗಿ ಬಂದಾಗ ನಾ ಕೆಲಸದ ವಿಚಾರದ ಬಗ್ಗೆ ಏನೋ ಸಹ ಕೇಳಲಿಲ್ಲ. ಕೇಳಿದ್ದಿಷ್ಟೆ, " ಅವರು ದಿನಕ್ಕೆ ಎಷ್ಟು 'ಬ್ರೇಕ್' ತೆಗೆದುಕೊಳ್ಳುತ್ತಾರೆ"? ಅದಕ್ಕೆ ಅವರಿಂದ ಬಂದ ಉತ್ತರ, "ಒಂದು ಘಂಟೆ. ಅಂದರೆ ೧೨:೩೦ ರಿಂದ :೩೦". ಅದಕ್ಕೆ ನಾನು ಕೇಳಿದೆ, 'ಮಧ್ಯೆ ಕಾಫಿ, ಟೀ ಬ್ರೇಕ್'? ಅದಕ್ಕವರು - "ಅವರು ಒಂದು ದೊಡ್ಡ ಕ್ಯಾನ್ ಲಿ ಕಾಫಿ ತುಂಬಿಸಿಕೊಂಡು ದಿನ ಇಡೀ ಅಲ್ಲೇ ಕುಳಿತಿರುತ್ತಾರೆ. ಎಲ್ಲಿಗೂ ಹೋಗುವುದಿಲ್ಲ. ಘಂಟೆಗೆ ಸರಿಯಾಗಿ ಮನೆಗೆ ಹೋಗುತ್ತಾರೆ.. ಅದರ ನಂತರ ಒಂದು ನಿಮಿಷವೂ ಇರುವುದಿಲ್ಲ.


ಈಗ ನನ್ನ ಆಫೀಸ್ ಕಥೆ ಹೇಳುತ್ತೇನೆ ಕೇಳಿ. :೩೦ ರಿಂದ :೩೦ ವರೆಗೆ ಘಂಟೆ ಕೆಲಸದ ವೇಳೆ ಅಂತ ತೆಗೆದುಕೊಂಡರೆ, ನಮ್ಮಲ್ಲಿ ಹಲವರ ಕೆಲಸದ ವೈಖರಿ ತರ ಇರುತ್ತದೆ. ಹೋಗಿ ಕೂರುತ್ತಲೆ, ೩೦ ನಿಮಿಷ ಕಾಫಿಗೆ, ಸಿಗರೇಟ್ ಗೆ ೧೫ ನಿಮಿಷ. ಮುಕ್ಕಾಲು ಘಂಟೆ ಅಲ್ಲೇ ತಡ. ಮತ್ತೆ ಒಂದು ಘಂಟೆಯ ನಂತರ ತಲೆಬಿಸಿ ಮಾರಾಯ ಅಂತ ಕಾಫಿ ಸಿಗರೇಟ್ ಬ್ರೇಕ್ ಇನ್ನೂ ೧೫ ನಿಮಿಷ ಮತ್ತೊಂದು ಗಂಟೆಯಲ್ಲಿ ಊಟದ ಬ್ರೇಕ್ ಅಂತ ೪೫ ನಿಮಿಷದಿಂದ ಒಂದು ಘಂಟೆ.. ಇಲ್ಲಿ ಮಾತ್ರ ಒಂದು ಘಂಟೆ ಬೇಕೇ ಬೇಕು. ಲೇಟ್ ಯಾಕೆ ಅಂತ ಯಾರಾದ್ರೂ ಕೇಳಿದ್ರೆ ಕೆಂಡದಂಥ ಕೋಪ. ಮತ್ತೆ ವಾಪಾಸ್ ಬರುವಾಗ ೧೦ ನಿಮಿಷ ಸಿಗರೇಟ್ ಬ್ರೇಕ್. ಮತ್ತೆ ಒಂದೆರಡು ಘಂಟೆಯಲ್ಲಿ ಬೇರೆ ಸಹೋದ್ಯೋಗಿಗಳ ಕ್ಯುಬಿಕಲ್ ಲಿ ಕುಳಿತು ಅರ್ಥವಿಲ್ಲದ ಕಾಲ ಹರಣ ಮಾಡುವ ಮಾತು.. ಉಪಯೋಗವಾಗುವಂಥದ್ದು ಏನೋ ಇಲ್ಲ! ಸರಾಸರಿ ನಾವು ಮಾಡುವ ಕೆಲಸ :೩೦ ಘಂಟೆ ಮಾತ್ರ!!! ಯಾಕೆ? ವಿಚಾರದಲ್ಲಿ ನಾವೇಕೆ ಅವರನ್ನು ಅನುಸರಿಸುವುದಿಲ್ಲ? ಕೆಲಸ ಯಾಕೆ ನಿಯೈತ್ತಾಗಿ ಮಾಡುವುದಿಲ್ಲ? ಆಫೀಸ್ ಲಿ ಕೂಡ ಕೆಲಸವಿಲ್ಲದ ಒಂದಷ್ಟು ಜನ ಮಾತು ಹರಟೆ ಗಲಾಟೆ ಮಾಡುತ್ತಾ ಸಮಯ ಕೊಳ್ಳುವುದಲ್ಲದೆ ಕೆಲಸ ಮಾಡುವವರಿಗೆ ಕಾಟ ಕೊಡುವಾಗ ಸಕ್ಕತ್ ಸಿಟ್ಟು ಬರುತ್ತದೆ. ಹೋಗಿ ನಾಲ್ಕು ಬಾರಿಸಿಬಿಡೋಣ ಅನಿಸುತ್ತದೆ. ಆಫೀಸ್ ವಾತಾವರಣದಲ್ಲಿ ಡಸ್ಟ್ಬಿನ್ ಇದ್ದರೂ ಸಹ, ಕಾಲಿನ ಬುಡಕ್ಕೊಂಡು ಡಸ್ಟ್ ಬಿನ್ ಕೊಟ್ಟರೂ ಸಹ ಲಿಫ್ಟ್, ಆಫೀಸ್ ಹೊರಗಡೆಯಲ್ಲ ಸಿಗರೇಟ್ ತುಂಡು ಬೆಂಕಿ ಕಡ್ಡಿ, ಕೋಕ್, ಪೆಪ್ಸೀ, ಫ್ರೂಟಿ ಕ್ಯಾನ್ ಗಳು ಅನಾಥ ಶವಗಳಂತೆ ಬಿದ್ದದ್ದು ನೋಡಿದರೆ ನಮ್ಮ ಜನರ ಅಶಿಸ್ತು ನೋಡಿ ಬೇಸರವಾಗುತ್ತದೆ. ಇಷ್ಟು ಓದಿ ಇಂಥ ಕೆಲಸ ಮಾಡುವ ನಾವು ಹೊರಗಿನವರಿಂದ ಕಿಸ್, ಸೆಕ್ಸ್, ಬಾರ್, ಪಬ್ ಮೋಜು ಮಸ್ತಿ ಬೇಕು ಅಂತ ಹುಚ್ಚರಂಥಾಡುತ್ತೇವೆ. ಅಲ್ಲಿನ ಒಳ್ಳೆಯ ಸಂಸ್ಕೃತಿ ಅರಿತು ಅಳವಡಿಸಿಕೊಳ್ಳಲಿ ನೋಡೋಣ? ಉಹೂಂ.. ಆಗುವುದಿಲ್ಲ.. ಒಳ್ಳೆದು ಬೇಡ. ಮಜಾ ಬೇಕು ಮಜಾ..
ನನ್ನ ಮೆನೇಜರ್ಗಳು ಕೂಡ ಬ್ರೇಕ್ ತೆಗೆದುಕೊಂಡಾಗ ಅವರು ಎಷ್ಟು ಸಮಯ ಹರಟೆ ಹೊಡೆಯುತ್ತಾರೆ ಅನ್ನುವುದನ್ನು ನಾನು ತುಂಬಾ ಸರಿ ಲೆಕ್ಕವಿತ್ಟಿದ್ದೇನೆ. ಅಮೆರಿಕಾದ ಮೆನೇಜರ್ಗಳು ಯಾವಾಗಲೂ ಸಹಾಯಕ್ಕೆ ಸಿದ್ಧವಿರುವಾಗ ನಮ್ಮವರು ಬ್ರೇಕ್ ಅಂತ ಗಂಟೆಗಂತಲೆ ಹರಟೆ ಹೊಡೆಯುತ್ತಿರುತ್ತಾರೆ. ನಿಜಾವಾಗ್ಲೂ ಬೇಜಾರಾಗುತ್ತದೆ.
 ಭಾರತ ಪ್ರೀತಿಗೆ ಹೆಸರಾದ ದೇಶ.. ಅಮ್ಮ ಮಗುವಿಗೆ ಕಮ್ಮಿ ಅಂದರೂ ಒಂದು ವರ್ಷದವರೆಗೂ ಮೊಲೆ ಹಾಲು ಕುಡಿಸುವಳು.  


ಅವಳ ಸೊಂಟದಿಂದ ಮಗುವನ್ನು ಮೂರು ವರ್ಷವೂ ಅಂಟಿಕೊಂಡೇ ಓಡಾಡುವಳು.. ರಾತ್ರಿಯಂತೂ ತನ್ನ ನಿದ್ದೆ ಬಿಟ್ಟು ಮಗುವನಪ್ಪಿ ತನ್ನ ಮೈಶಾಖ ನೀಡುವಳು.. ತಂದೆಯೂ ಸಹ ಮಗುವನ್ನು ಮಗ್ಗುಲಲ್ಲೇ ಅಪ್ಪಿ, ಹೆಗಲ ಮೇಲೆ ಕೂರಿಸಿ, ಬೆನ್ನ ಮೇಲೆ ಹೊತ್ತು ಬೆಚ್ಚಗೆ ಬೆಳೆಸುವನು. ಓದು ಮುಗಿದು ಮದುವೆಯಾದರೂ ಸಹ ನಮ್ಮ ಭಾರವ ಚಿಕ್ಕಂದಿನಲ್ಲಿ ಹೊತ್ತ ಉಪ್ಪಿನ ಮೊಟೆಯಂತೆಯೆ ಹೊರುವನು. ಬಾಂಧವ್ಯಕ್ಕೆ ಬೆಲೆ ಕೊಡುವ ದೇಶ ನಮ್ಮದು.


ಮುತ್ತು ಅಥವಾ ಲೈಂಗಿಕ ಕ್ರಿಯೆಗೆ ನಮ್ಮಲ್ಲಿ ನಮ್ಮಲ್ಲಿ  ಅದರದೇ ಆದ ತೀರಾ ಖಾಸಗಿ ಅರ್ಥವಿದೆ. ಮುತ್ತು ಒಂದು ಅತ್ಯಂತ ಮಧುರ ಭಾವನೆ. ನಾವು ತೀರಾ ಇಷ್ಟ ಪಡುವ ವ್ಯಕ್ತಿಯೊಬ್ಬನಿಗೆ ಅಥವಾ ಒಬ್ಬಳಿಗೆ ತೀರಾ ಖಾಸಗಿಯಾಗಿ ನೀಡುವಂತಹ ಪ್ರೀತಿಯ ಸೂಚಕ. ಅದನ್ನು ಯಾರಿಗೂ ತೋರದೆ ಅವರಿಗೆ ಕೊಟ್ಟು ನಾ ನಿನ್ನನ್ನ ಎಷ್ಟು ಪ್ರೀತಿಸುತ್ತೇನೆ ಅಂತ ನಿನಗೆ ಮಾತ್ರ ಗೊತ್ತು.. ಬೇರೆಯವರಿಗೆ ಅರ್ಥವಾಗದು. ಅದಕ್ಕೆ ಇದನ್ನ ನಿನಗಾಗೆ ನೀಡುತ್ತಿದ್ದೇನೆ. ಅರ್ಥ ಮಾಡಿಕೊ ಅಂತ ಹೇಳುವ ರೀತಿ ಅದು. ನಾಲ್ಕು ಜನರಿಗೆ ತೋರಿಸುವಂತಹ ಅವಶ್ಯಕತೆ ನಮ್ಮಲ್ಲಿಲ್ಲ.. ಪ್ರೀತಿಯನ್ನು ತೋರಿಸಿ ಮಾಡುವ ಅವಶ್ಯಕತೆ ಭಾರತೀಯರಿಗೆ ಇಲ್ಲಾರೀ. ಅರ್ಥ ಮಾಡ್ಕೊಳಿ. ಅದು ನಮ್ಮ ಸಂಸ್ಕೃತಿಯಲ್ಲಿಯೇ ಇದೆ. ಅದು ನಮ್ಮ ರಕ್ತದಲ್ಲಿ ಬೆರೆತಿದೆ. ನಮ್ಮಿಂದ ಪಾಶ್ಚಾತ್ಯರು ಅದನ್ನು ಕಲಿಯಲು ಇಷ್ಟಪಡುತ್ತಾರೆ. ಅಲ್ಲಿಯ ದೇಶಗಳಲ್ಲಾಗುವಷ್ಟು ಆತ್ಮಹತ್ಯೆ, ಮಾನಸಿಕ ಖಿನ್ನತೆ ನಮ್ಮ ಜನರಲ್ಲಾಗುವುದಿಲ್ಲ. ಯಾಕೆ? ನಮ್ಮ ಸಂಸ್ಕೃತಿ ಅದು.

ಒಳ್ಳೆಯದನ್ನು ಕಲಿಯೋಣ.. ಸುಮ್ಮನೆ ಬೇಡದೆ ಇರುವುದಕ್ಕೆ ತಲೆ ಹಾಳು ಮಾಡಿಕೊಂಡು ಮೂರ್ಖರಂತೆ ವರ್ತಿಸುವುದಾದರೆ, ನಮ್ಮನ್ನು ತಂದೆ ತಾಯಿ ಓದಿಸಿ ಪ್ರಯೋಜನ ಏನು? ಎಂತ ಯುವಜನತೆಯೋ? ಎಂತ ಉದ್ಧಾರ ಮಾಡ್ತಾರೋ? ಇಷ್ಟರ ಮೇಲೆ ಹೊರಗೆ ಮುತ್ತು ಕೊಟ್ಟು ತೋರಿಸಬೇಕ? ತೋರಿಸ್ರಪ್ಪ..! ಅರ್ಥವಿಲ್ಲದ ಮಾತಿಗೆ ಸುಮ್ಮನಿರುವುದೆ ಉತ್ತರ ಅಂತ ಕುವೆಂಪು ಮಾತನ್ನು ಮನಸ್ಸಿಲ್ಲಿತ್ತು ಸುಮ್ಮನಾಗುತ್ತೇವೆ.




Friday, May 9, 2014

ರಿಲೆಶನ್ಸ್ ಕನ್ಫ್ಯುಶನ್ಸ್... !!

ವರ್ಷಗಳ ಹಿಂದೆ ಓದಿದ ಕವಲು ಕಾದಂಬರಿ ಅದ್ಯಾಕೋ ಇಂದು ತುಂಬಾ ಕಾಡುತ್ತಿದೆ. ಟೀವಿಯಲ್ಲಿ ಈ ಸಂಜೆ ಯಾಕಾಗಿದೆ ನೀನಿಲ್ಲದೆ ಹಾಡು ಚಾಲೂ ಇದೆ.. ಹಾಡು ಮುಗಿದು ಮತ್ತೊಂದು ಗೀತೆ... 'ನಿನ್ನಿಂದಲೇ ನಿನ್ನಿಂದಲೇ.. ಕನಸೊಂದು ಶುರುವಾಗಿದೆ' ಹಾಡು ಮನದಾಳದಲ್ಲಿ ಬೇರೂರುತ್ತಿದೆ. ಆದರೆ ನೀನೇ ಇಲ್ಲ. ಮನೆಮಂದಿಯೆಲ್ಲ ಸಡಗರವಾಗಿ ಏನೋ ನನಗೆ ಮದುವೆ ಮಾಡ್ಬೇಕೆಂದು ನಿನ್ನ ತೋರಿಸಿ ಮಾತೆಲ್ಲ ಮುಗಿದು ನೀನು ದಿನಾ 'ನೀವೇ ನಂಗೆಲ್ಲಾ' ಅಂತ ಹುಸಿ ಪ್ರಾಮಿಸ್ ಮಾಡಿ ಎರಡೇ ವಾರದಲ್ಲಿ ಟೈಂ ಪಾಸ್ ಮಾಡಿ ಕೈ ಕೊಟ್ಟಮೇಲೆ ಒಂದು ಕೊಡುಗೆ ಕೊಡಬೇಕಲ್ಲ. ಇಗೋ ಈ ಬರಹ ನಿನಗೆ ಸಮರ್ಪಣೆ.
ನೀ ಈ ತರ ಗುಮ್ಮನ ತರ ಬೇಜಾರ್ ಮಾಡ್ಕೊಂಡ್ ಕೂರ್ಬೆಡವೊ, ನಿನ್ನ 'ಮ್ಯಾನರಿಸ್ಮ್' ಇದು ಸರಿ ಹೊಂದುವುದಿಲ್ಲ. ನೀನು ಬಿಂದಾಸ್ ಆಗಿದ್ರನ್ನೇ ಚೆಂದ ಅಂತ ನನ್ನಲ್ಲಿ ಹುಮ್ಮಸ್ಸು ತುಂಬಿಸಿದ ನನ್ನ ತಮ್ಮನಿಗೆ ಈ ಬರಹ ಸಮರ್ಪಣೆ..
ಲೇ, ಬೀ ಎಂ ಟಿ ಸಿ ಹೋದರೆ ವೋಲ್ವೋ ಬರುತ್ತೆ ಹೋಗೋ. ಹೋಗಿದ್ದು ಒಳ್ಳೆಯದಕ್ಕೇ, ಇವತ್ತಲ್ಲ ನಾಳೆ ಕೈ ಕೊಡೋವ್ರು ಬೇಡ. ನಿನಗೆ ಒಳಿತು ತರುವ ಒಳ್ಳೆಯ ಹುಡುಗಿಯೇ ಸಿಗುತ್ತಾಳೆ ಅಂತ ಸಮಾಧಾನ ಹೇಳಿದ ನನ್ನ ಗೆಳೆಯರಿಗೆ ಈ ಬರಹದ ಸಮರ್ಪಣೆ.
ಮನೆಗೆ ಫೋನ್ ಮಾಡಿ, 'ಅಪ್ಪ, ನನ್ನ ಬಗ್ಗೆ ಇಲ್ಲಸಲ್ಲದ ಕಥೆಯಲ್ಲ್ಲ ಹೇಳಿದಳು ಅಂತ ಕಣ್ಣೀರು ಹಾಕಿದಾಗ. 'ತೋ.. ಹೇಸು ಮನುಷ್ಯ. ನೀನು ಗಂಡಸು. ಕಣ್ಣೀರು ಶೋಭೆ ತರುವುದಿಲ್ಲ. ಹೆದರಿಸಬೇಕು. ಹೆದರಬಾರದು' ಅಂತ ಧೈರ್ಯ ಹೇಳಿದ ಅಪ್ಪನಿಗೆ ಈ ಬರಹದ ಸಮರ್ಪಣೆ.

ಇರಲಿ.. ಯಾವ ವಿಷಯ ಅಂತ ಆಗಲೇ ನೀವು ತಲೆ ಕೆರೆದುಕೊಳ್ಳಬಹುದು. 'ಸಂಬಂಧಗಳು'. ಹೌದು.. ತೀರಾ ಸಾಮಾನ್ಯ ವಿಷಯ ಅಲ್ಲ್ವಾ? ಹೌದು.. ಆದರೆ ಅದರ ಹಿಂದಿನ ಒಂದು ಜಗತ್ತು? ತೀರಾ ನಿಗೂಢ!! ಒಂದು ಮಟ್ಟಿಗೆ ಹೇಳುವುದಾದರೆ ಟಿ ವಿ ೯ 'ಹೀಗೂ ಉಂಟೆ' ತರಹ.

ವರ್ಷದ ಹಿಂದೆ ಇದರ ಬಗ್ಗೆ ಸ್ವಲ್ಪವೇ ಬರೆದಿದ್ದೆ. ಗೆಳೆಯನೊಬ್ಬ ಅದಕ್ಕೆ ಒಂದಷ್ಟು ಸೇರಿಸಿ ಚೆನ್ನಾಗಿಯೇ ಬರೆದಿದ್ದ. ಮನಸ್ಸಿಗೆ ಹಿಡಿಸುವ ಹಾಗೆ!

ಉದಾಹರಣೆಗಳು:.
ಮೊದಲನೆಯದು:
ಮಲೆನಾಡ ಕರೆಂಟ್ ತರಹ: ದಿನಕ್ಕೆ ೧೨ ಗಂಟೆ ಪವರ್ ಕಟ್... ಕೆಲವು ಸಂಬಂಧಗಳು ಕೂಡ ಇದೆ ತರಹ ಅರ್ಧ ದಿನ ಇಮ್ಮಡಿ ಪ್ರೀತಿ.. ಇನ್ನರ್ಧ ದಿನ ಪೂರ್ತಿ ಜಗಳ.. ಮುನಿಸು.. ಇರಿಸು ಮುರಿಸು.. ಅಪ್ಪಿ ತಪ್ಪಿ ನೀವು ಮದ್ಯೆ ಹೋದ್ರೋ ನಿಮ್ಮ ಕಥೆ ಮುಗಿಯಿತು. ಇಬ್ಬರೂ ಸೇರಿ ನಿಮ್ಮ ಮೇಲೆಯೇ ಮುಗಿಬೀಳುತ್ತಾರೆ. ಇದೊಂದು ತರ ನಮ್ಮ ಅಪ್ಪ ಅಮ್ಮನ ತರಹ. ಸಂಸಾರದ ಸಾಮರಸ್ಯ ಅಂತ ಹೇಳಬಹುದು. ಏಳು ಬೀಳುಗಳ ನಡುವೆ ಕರೆಂಟ್ ಬರುವುದಂತೂ ಗ್ಯಾರಂಟಿ.

ಎರಡನೆಯದು:
ಮಲೆನಾಡ ಕರೆಂಟ್ (ಮಳೆಗಾಲದಲ್ಲಿ).. ದೇವರೇ.. ಈ ತರಹ ಸಂಬಂಧಗಳು ಶತ್ರುವಿಗೂ ಬೇಡ. ಇದೊಂಥರಾ ಬಾಯ್ಫ್ರೆಂಡ್ ಗರ್ರ್ಲ್ಫ್ರ್ಫ್ರೆಂಡ್ ನಡುವೆ ಇನ್ಯಾವುದೋ ಹುಡುಗ ಹುಡುಗಿ ಬಂದಾಗ ಆಗುವ ರೀತಿ. ಒಂದು ಸರಿ ಅನುಮಾನ ಮನಸ್ಸಿನಲ್ಲಿ ಹೊಕ್ಕಿತೆಂದರೆ ಅದು ಯಾವಾಗ ಸರಿ ಆಗುವುದೋ ಆ ದೇವರಿಗೂ ಸಹ ಗ್ಯಾರಂಟಿ ಇಲ್ಲ.
ಇದು ಸಾಲ ಕೊಟ್ಟ ಜನಕ್ಕೂ ಅನುವಹಿಸುವುದುಂಟು.. ನೀವು ಯಾರನ್ನ ನಂಬಿ ಸಹಾಯ ಮಾಡುತ್ತೀರೋ ಅವರು ಹೇಳಿದ ಸಮಯಕ್ಕೆ ಹಣ ವಾಪಸ್ ಕೊಡುವುದೇ ಇಲ್ಲ. ಹಣ ಕೊಟ್ಟಾಗ ಮಾತ್ರ ಹಿರಿ ಹಿರಿ ಹಿಗ್ಗಿದ ಮನುಷ್ಯ ವಾಪಸ್ ಕೇಳುವಾಗ 'ಪತ್ತೆಯೇ ಇರುವುದಿಲ್ಲ', ಅಥವಾ ಅದ್ಯಾವ ಊರಲ್ಲಿ ಇರುವನೋ.. ಇದ್ದರೂ ನಿಮ್ಮ ಫೋನ್ ರಿಸೀವ್ ಮಾಡುವುದಿಲ್ಲ. ಕೊನೆಗೆ ನೀವೇ ಸುಸ್ತಾಗಿ 'ಸಾಯ್ಲಿ ಎಲ್ಲಾದ್ರೂ.. ಹಣ ಹೋಯಿತು'ಎಂದಾಗ ಯಾವತ್ತೋ ಒಮ್ಮೆ ಅವನೇ ನಿಮಗೆ ಕರೆ ಮಾಡುವ.. 'ಲೆ.. ಸಾರಿ.. ಅವತ್ತು ಫೋನ್ ಎತ್ತೋಕ್ ಆಗಿಲ್ಲ. ಸ್ವಲ್ಪ ಹಣದ ಸಹಾಯ ಸಿಗಬಹುದಾ?' ಅಂತ..!!
ನಮ್ಮೂರ್ ಕರೆಂಟ್ ಕೂಡಾ ಹೀಗೆಯೇ ಮಳೆಗಾಲದಲ್ಲಿ.. ಹೋದರೆ ಅದೆಷ್ಟೋ ದಿನ ಆದಮೇಲೆ ಒಮ್ಮೆ ಬರುತ್ತದೆ!

ಮೂರನೆಯದು:
ದನದ ಕೊಟ್ಟಿಗೆಯ ಮೂಲೆಯಲ್ಲಿ ಉರಿಯುವ ಮುರಿನ ಕೊಟ್ಟಿಗೆಯ ಬೆಂಕಿಯ ಕೆಂಡದಂತೆ! ಬೂದಿ ಮುಚ್ಚಿದ ಕೆಂಡ..!!
ಇದು ಸಾಮಾನ್ಯವಾಗಿ ನಿಮ್ಮ ನಿಮ್ಮ ನೆಂಟರಿಷ್ಟ್ರಿಗೆ ಹೋಲಿಸಬಹುದು.. ನಿಮ್ಮನ್ನು ತುಂಬಾ ಪ್ರೀತಿಸುವಂತೆ ಹೊರಗಿನಿಂದಲೇ ನಟಿಸುತ್ತಾ.. ಒಳಗಿನಿಂದ 'ಹೆಂಗಾದ್ರೂ ಮಾಡಿ ಇವನಿಗೆ ಹೊಗೆ ಹಾಕ್ಬೇಕಲ್ಲ' ಅಂತ ಕಾಯ್ತಾ ಇರುತ್ತಾರೆ. ಸರಿಯಾದ ಸಂದರ್ಭ ನೋಡಿ ನಿಮಗೆ ಚೆನ್ನಾಗಿ ಹೊಗೆ ಹಾಕ್ತಾರೆ. ಆವಾಗ್ಲೇ ನಿಮಗೆ ಗೊತ್ತಾಗುವುದು.. ಓ.. ಕೆಂಡ ಉರಿತಾ ಇತ್ತು ಒಳಗೆ. ಇಷ್ಟು ದಿನ ಬರೀ ಬೂದಿ ಇತ್ತು ಅಂತ ತಪ್ಪು ತಿಳ್ಕೊಂಡಿದ್ದೆ ಅಂತ.. ಅಲ್ವಾ?
ಇದು ಹುಡುಗಿಯರಿಗೆ ಜಾಸ್ತಿ ಆಗುವುದುಂಟು.. ತುಂಬಾ ಫ್ರೆಂಡ್ಸ್ ಆಗಿರೋರೆ ಒಬ್ಬಳಿಗೆ ಒಳ್ಳೆ ಬಾಯ್‌ಫ್ರೆಂಡ್ ಸಿಕ್ಕರೆ ಒಳಗೆ ತಂಗ್ಯಾಕಿಲ್ಲ ಅಂತ ಅಸೂಯೆ ಪಡುತ್ತಿರುತ್ತಾಳೆ.. ಚಾನ್ಸ್ ಸಿಕ್ಕರೆ ಅದಕ್ಕೊಂದು ಹೋಮ ಖಂಡಿತ.

ನಾಲ್ಕನೆಯದು:
ಬಸ್.. ಟ್ರೈನ್ ಟಿಕೆಟ್ ತರಹ.. ಪ್ರಯಾಣ ಆಗುವ ವರೆಗೆ ಮಾತ್ರ..
ಇದು ಸದ್ಯದ ಜಗತ್ತಿನ ಹುಡುಗ ಹುಡುಗಿಯರ ರಿಲೇಶನ್ಸ್ ಗೆ ಸರಿಹೊಂದುವುದು.. ತೀರಾ ಸಾಮಾನ್ಯವಾಗಿ ಪ್ರಯಾಣಿಕರಂತೆ ಪರಿಚಯವಾಗುವ ಇವರು ಯಾರು ಎಲ್ಲಿಗೆ ಟಿಕೆಟ್ ತಗೊಂಡಿರುವರು ಅಂತ ಪ್ರಶ್ನಿಸುವುದೇ ಇಲ್ಲ. ಓಕೆ.. ನೋಡೋಣ ಪ್ರಯಾಣ ಇರುವ ವರೆಗೆ ಆರಾಮಾಗಿ ಇರುವ ಅಂತ ಶುರು ಮಾಡಿಕೊಳ್ಳುವರು. ಇಳಿಯುವ ಜಾಗ ಬಂದಾಗಲೇ ತಿಳಿಯುವುದು ಎಷ್ಟು ಕಷ್ಟ ಅಂತ... ಯಾರು ಮೊದಲು ಇಳಿಯುತ್ತಾರೋ..ಅವರು ಟಿಕೆಟ್ ಎಸೆದು ಆರಾಮಾಗಿ ಜಾಗ ಖಾಲಿ ಮಾಡುವರು.. ಒಬ್ಬರೇ ಉಳಿದವರಿಗೆ ಸ್ವಲ್ಪ ಕಾಲ ಒಂಟಿತನ ಕಾಡುವುದು ಕಟ್ಟಿಟ್ಟ ಬುತ್ತಿ.
ಇದು ಇಲ್ಲಿ ಹಲವರಿಗೆ ಖಂಡಿತ ಆಗಿಯೇ ಆಗಿರುತ್ತದೆ.. ಆದರೆ ಹೇಳಿಕೊಳ್ಳುವುದಿಲ್ಲ.

ಐದನೆಯದು.
ಆಟೋ ಪ್ರಯಾಣದ ರೀತಿ..
ಶಾರ್ಟ್ ಟರ್ಮ್.. ಫಾಸ್ಟ್ ಎಂಡ್ ಫ್ಯೂರಿಯಸ್.. ಎಲ್ಲಿಗೆ ಹೋಗಬೇಕು ಎಷ್ಟು? ಹೈ ಫೈ ಸೊಸೈಟಿಯ ಜನರು ಫಾಲೋ ಮಾಡುವ ಸಂಸ್ಕೃತಿ.. ನನಗೆ ಇಷ್ಟೇ ಬೇಕು.. ಇದರ ಮುಂದೆ ನನಗೂ ನಿನಗೂ ಸಂಬಂಧವಿಲ್ಲಾ. ಮಾನಸಿಕವಾಗಿ ನನಗೆ ನಿನಗೆ ಯಾವ ರೀತಿಯ ಸಂಭಂಧಗಳೂ ಇಲ್ಲ.. 'ಐ ವಾಂಟ್.. ಯೂ ವಾಂಟ್'.. ಲೆಟ್ಸ್ ಬೀ ಫ್ರೆಂಡ್ಸ್ ವಿತ್ ಬೆನಿಫಿಟ್ಸ್. ಇಟ್ಸ್ ಓವರ್.

ಆರನೆಯದು..
ಐಸ್ ಕ್ರೀಮ್.. ಫಾಸ್ಟ್ ಫುಡ್ ಏನಾದರೂ ಅಂದುಕೊಳ್ಳಿ..
ಅದು ಆ ಸ್ಥಿತಿಯಲ್ಲಿದ್ದಾಗಳಷ್ಟೆ ಚೆಂದ.. ನಮ್ಮ ರಾಜಕಾರಣಿಗಳಂತೆ.. ಚುನಾವಣಾ ಸಮಯ ಬಂದಾಗಲೇ ಅವರು ಬಗ್ಗಿ ನಡೆಯುವುದು... ನಿಮ್ಮಿಂದ ಅವರಿಗೆ ಏನೋ ಸಹಾಯವಾಗುವುದಿದೆ ಅಂತ ನಿಮಗೆ ಅರಿವಾದಾಗಲೇ ನೀವು ಕೆಲಸ ಮಾಡಿಸಿಕೊಳ್ಳಬೇಕು. ಈಗಿನ ಕಾರ್ಪೊರೇಟ್ ಪ್ರಪಂಚದಲ್ಲೂ ಅನ್ವಯವಾಗುತ್ತದೆ. ನಿಮ್ಮಿಂದ ಏನೋ ಆಗುವುದಿದೆ ಅಂದರೆ ಮಾತ್ರ ಜನ ನಿಮ್ಮಲ್ಲಿಗೆ ಬರುತ್ತಾರೆ. ನಿಮ್ಮ ಕೆಲಸ ಮಾಡಿಕೊಂಡಿರೋ ಬದುಕಿದಿರಿ... ಇಲ್ಲವೆಂದರೆ ಗೊತ್ತಲ್ಲ? ಐಸ್ ಕರಗಿದ ಮೇಲೆ ಪಾನಿ ಪೂರಿ ಆರಿದಮೇಲೆ? ಉಹೂಂ.. ನೋ ಯೂಸ್..!

ಕೊನೆಯದು:
ಮೇಣದ ಬತ್ತಿಯಂತೆ..
ನೀವು ಇರುವವರೆಗೆ ನಿಮ್ಮ ಹಣದಲ್ಲಿ ಮಜಾ ಮಾಡಿ.. ನಿಮ್ಮ ಬೆಳಕಲ್ಲಿ ಅವರು ತಮಗೆ ಬೇಕಾದ ಕೆಲಸವನ್ನೆಲ್ಲಾ ಮಾಡಿಕೊಂಡು ನಂತರ ತಮಗೆ ಸಂಬಂಧವೇ ಇಲ್ಲದಂತೆ ನಿಮ್ಮನ್ನು ನಂದಿಸಿ ಆರಾಮಾಗಿ ಹೊದಿಗೆ ಹೊದ್ದು ಮಲಗುವ ಜನರು.. ನಂದಿಹೋದಮೇಲೆಯೇ ನಿಮಗೆ ಗೊತ್ತಾಗುವುದು.. ಚೆ.. ಆಯ್ತಲ್ಲ ನನ್ನ ಉಪಯೋಗ!!

ಹೀಗೆ ಪ್ರಪಂಚ ಬಹಳ ಬೇಗ ಬೆಳೆದಂತೆ.. ಸಂಭಂಧಗಳಿಗೆ ಬೆಲೆ ಕೂಡ ಇಲ್ಲವಾದಂತಾಗಿದೆ. ತೋಳಲ್ಲೇ ಹೊತ್ತು ಮಗುವಿನ ಮೈ ಶಾಖ ಕೊಡುತ್ತಿದ್ದ ಭಾರತೀಯ ಮಹಿಳೆ ಮಗುವಿಗೆ ಗಾಡಿಯಲ್ಲಿ ಕೂರಿಸುವ ಕಾಲವೂ ಬಂದಿದೆ.. ಮನೆಯಲ್ಲಿಯೇ ಆಡಿ ಬೆಳೆದು ಮನೆಯ ಮೌಲ್ಯ ತಿಳಿವ ಮಗುವನ್ನು 'ಪ್ಲೇ ಹೋಮ್' ಲೀ ಗುಮ್ಮನಂತಾಗಿಸುವ ಕಾಲವೂ ಬಂದಾಗಿದೆ. ಸದ್ಯ ನಮಗಾದರೂ ಇಂಥ ಜನುಮ ಬರಲಿಲ್ಲವಲ್ಲ ಎಂಬುದೇ ಒಂದು ಅದೃಷ್ಟದ ಮಾತು..

ನೋಡಿ.. ನಿಮಗೇನಾದರೂ ಹೊಳೆದಲ್ಲಿ ನೀವು ಈ ಬರಹಕ್ಕೆ ಸ್ವಲ್ಪ ಸೇರಿಸಿ.. ತಪ್ಪಿದ್ದಲ್ಲಿ ಕ್ಷಮಿಸಿ.. 'ಸರ್ವೇ ಜನಾಃ ಸುಖಿನೋ ಭವಂತು'!

ಸಂಬಂಧಗಳಿಗೆ ಬೆಲೆ ಬರಲಿ.. ಹಣಕ್ಕೆ ಇಲ್ಲದಿದ್ದರೂ ಬೇಡ... ಅಲ್ಲವಾ

Monday, May 5, 2014

'ಪ್ಲೀಸ್.. ಡು ನಾಟ್ ಲವ್ ಮೀ'

ಅದ್ಯಾಕೋ ಆಫೀಸ್‌ನಲ್ಲಿ ಇತ್ತೀಚೆಗೆ ಇಂಗ್ಲೀಷ್ ಹಾಡು ಕೇಳುವ ಹೊಸ ಚಟಕ್ಕೆ ಬಿದ್ದಿದ್ದೆ... 'ವಿಮಾನವ ನೋಡುತ್ತಾ ಹುಡುಗಿಯೊಬ್ಬಳು ಅದನ್ನೇ ಉಲ್ಕೆಯೆಂದು ಭಾವಿಸಿ ಅದರಲ್ಲಿ ತನ್ನ ಆಸೆಗಳನ್ನು ತೋಡಿಕೊಳ್ಳಬಹುದಾ ಎಂಬ ಭಾವವು ಮನಸ್ಸಿಗೆ ತಾಕಿತ್ತು. ಅದೇ ಹಾಡಿನಲ್ಲಿ ಜೀವನ ಕೆಲವೊಮ್ಮೆ ನಮ್ಮನ್ನು ಕತ್ತಲೆಗೆ ಸರಿಸುತ್ತದೆ.. ಅದೆಷ್ಟೋ ಬಾರಿ ನಮ್ಮ ಫೋನ್ ದಿಟ್ಟಿಸುತ್ತಾ ನಮ್ಮನ್ನು ನೆನೆಸಿಕೊಳ್ಳದ ಕೆಲವರ ಕಾಲ್ ಮೆಸೇಜ್ಗಳಿಗಾಗಿ ಕಾಯುತ್ತಾ ಕುಳಿತುಬಿಡುತ್ತೇವೆ.. ಆದರೆ  ಜೀವನ ಅದನ್ನು ಮರೆಸಿ ನಿಮ್ಮ ಕತ್ತಲೆಯನ್ನು ಬೆಳಕಿಗೆ ಮತ್ತೊಮ್ಮೆ ತಳ್ಳುತ್ತದೆ. ಅದ್ಯಾವುದೋ ಕಾಣದ ಕೈ ನಿಮ್ಮನ್ನು ಪಾತಾಳದಿಂದ ಎತ್ತಿ ಮತ್ತೆ ಮುನ್ನಡೆಸುತ್ತದೆ!! ಇಷ್ಟು ನನ್ನ ಜೀವನದಲ್ಲಿ ನಡೆದದ್ದಲ್ಲದೆ ಜೀವನ ಮತ್ತೊಮ್ಮೆ ನನ್ನನ್ನು ಕತ್ತಲಿಗೆ ತಳ್ಳಿದ್ದು ತೀರಾ ದುರದೃಷ್ಟಕರ!



ಅವಳು ಕೈ ಕೊಟ್ಟು ಅರ್ಧ ವರುಷವಾಯಿತು.. ಇವಳು ಕೈ ಬಿಟ್ಟು ಒಂದು ವಾರವಾಯಿತು..! ಟೋಟಲಿ ೨ ವರುಷಗಳ ನನ್ನ ಕನಸಿನ ಜೀವನ ನುಚ್ಚು ನೂರಾಯಿತು. ಹೂವಿನ ದಳಗಳನ್ನು 'ಇವಳು ವಾಪಸ್ ಬರ್ತಾಳೆ, ಬರಲ್ಲ ಅಂತ ಕಿತ್ತು ಖಾಲಿ ಮಾಡಿ ಪಾಪ ಕಟ್ಟಿಕೊಂಡದ್ದೂ ಆಯಿತು.. ಶಾಲಾ ಸಮಯದಲ್ಲಿ ಕಲಿತ 'ಫ್ಲೆಮ್ಸ್' ಜೊತೆಗೆ ನಮ್ಮ ಹೆಸರು ಸೇರಿಸಿ ಅಪ್ಪಿ ತಪ್ಪಿ ನಮ್ಮ ಸಂಭಂಧಗಳು ತಪ್ಪಾಗಿ ಗುರುತಾಗಿವೆಯೇ ಅಂತ ತಾಳೆ ನೋಡಿದ್ದೂ ಆಯಿತು.. ಇವತ್ತು ಇಂಡಿಯಾ ಗೆದ್ದರೆ.. ಇವಳು ಮತ್ತೆ ವಾಪಸ್ ಬರ್ತಾಳೆ ಅಂತ ಕನಸು ಕಂಡದ್ದಾಯಿತು.. ಇಂಡಿಯಾ ಗೆಡ್ದದ್ದಾಯಿತು.. ನೀ ಬರಲೇ ಇಲ್ಲ. ನೀ ಬರೋದು ಇಲ್ಲ..
ಸರಿ.. ನನಗುಲಿದದ್ದು ಯೂ ಟ್ಯೂಬ್ ಮತ್ತೊಮ್ಮೆ! 'ನಾ ರಾಶಿ ರಾಶಿ ಕನಸ ಕೂಡಿಸಿಟ್ಟೆ..! ನೀ ಅದರ ಮೇಲೆ ಬೆಂಕಿ ಸುರಿದು ಹೋದೆ.' ಹೋದರೆ ಹೊಗೆ ನೀ ದೂರ' ಹಾಡು ಕೇಳಿ ನಿನ್ನ ಬಯ್ದರೂ ನೀ ಮನದಿಂದ ಹೋಗಲಿಲ್ಲ. ಶನಿಯಂತೆ ಅದೇ ಮನೆಯಲ್ಲೇ ಕುಳಿತೆ! ಹೋಗಲಿ ನೀ ಅಂತೂ ಕೈ ಹಿಡಿಲಿಲ್ಲ.. ನೀ ತಂದ ನೋವನ್ನು ಮರೆಸುವೇ ಅಂತ ಜೀವನ ಕೊಟ್ಟ ಇನ್ನೊಂದು ಜೀವ ಕೂಡ ನಿನ್ನ ಕಥೆ ಕೇಳಿ ನನ್ನ ಹೃದಯದಲ್ಲಿ ಬೆಳೆದ ಹೊಸ ಪೈರನ್ನು ಚಿವುಟಿಯೇ ಬಿಟ್ಟಳು. ಅದಲ್ಲದೆ, 'ನಿನ್ನೊಂದಿಗಿದ್ದು ನನ್ನ ಜೀವನ ಹಾಳು ಮಾಡಿಕೊಳ್ಳಲು ನಾನು ಮೂರ್ಖಳೆನಲ್ಲ ಅನ್ನುವ ಮಾತು ನೀ ಹಾಕಿದ್ದ ಬರೆಗೆ ಅವಳು ಉಪ್ಪು ಹಾಕಿ ನೆಕ್ಕಿದಂತಿತ್ತು.
 ನನ್ನ ಪಾಡಿಗೆ ನನ್ನದೇ ಕನಸಿನ ಲೋಕವನ್ನು ಕಟ್ಟಿಕೊಂಡು ಯಾವುದೋ ದೇಶದಲ್ಲಿ ಟ್ರಾವೆಲ್ ಫೋಟೋಗ್ರಾಫರ್ ಆಗಿ ಕ್ಯಾಮರಾ ಪುಸ್ತಕ ಹಿಡಿದು ಹೊಸ ಜನ ಹೊಸ ಮನ ಹೊಸ ಗಾಳಿ ಹೊಸ ಹೊಂಗಿರಣವ ತಾಕಲು ಬಯಸುತ್ತಿದ್ದ ಕಂಗಳಲಿ ಕತ್ತಲೆ ತುಂಬಿದ ನಿಮ್ಮಿಬ್ಬರನ್ನು ನಾ ಎಂದಿಗೂ ಕ್ಷಮಿಸುವುದಿಲ್ಲ. ಪ್ರತಿ ಸಾರಿಯೂ ನ್ಯೂಸ್ ಚಾನೆಲ್‌ನಲ್ಲಿ ನಿರ್ಭಯಳಂತ ಹುಡುಗಿಯ ದುರಂತ ಕಥೆಯನ್ನು ತೋರುವಾಗ ನಮ್ಮೆಲ್ಲರ ಮನ ಮಿಡಿಯುತ್ತದೆ. ಹುಡುಗನೊಬ್ಬ ಹುಡುಗಿಯ ಜೀವನದಲ್ಲಿ ಆಟವಾಡಿದರೆ ಆತನಿಗೆ 'ಫ್ಲರ್ಟ್' ಎಂಬ ಪಟ್ಟ ಕಟ್ಟಿ ಆತನ ಗುಣಕ್ಕೆ ಘೇರಾವ್ ಹಾಕುತ್ತೀರಾ. ಅದೇ ಹುಡುಗಿಯರು ಅದನ್ನೇ ಹುಡುಗನೊಬ್ಬನಿಗೆ ಹುಸಿ ಕನಸುಗಳನ್ನು ತುಂಬಿ, ಬೇಡ ಅಂದರೂ ಬಿಡದೆ ತಲೆಯ ಮೇಲೆ ಕುಳಿತು ನೀನೇ ಬೇಕು ಅಂತ ಮನಸು ಕೆಡಿಸಿ, ಅದ್ಯಾಕೋ ಸಂದರ್ಭಗಳು ತನ್ನ ಕಡೆಗೆ ವಾಲುತ್ತಿಲ್ಲ ಅನಿಸುವಾಗ ಬೇರೆಡೆ ಮೀನಿನಂತೆ ಜಾರಿಕೊಳ್ಳುವ ನೀವು ಅದೆಂತವರು? ನಿಮಗೆ ಧೈರ್ಯವಿಲ್ಲವ ಅಥವಾ ಒಂದು ಹೃದಯೋದೊಂದಿಗೆ ಆಡಿ ಖುಷಿ ಪಡೆದುಕೊಳ್ಳುವ ಹುಚ್ಚು ಚಟವಾ? ಅದೇ ಶುರುವಿನಲ್ಲಿ 'ಅವನನ್ನು ನಾ ಬಿಡುವುದಿಲ್ಲ, ನಮ್ಮ ಮನೆಯಲ್ಲಿ ಪೂರ್ಣ ಒಪ್ಪಿಗೆಯಂದಿದ್ದ ನೀನು', ಆರು ತಿಂಗಳ ನಂತ್ರ 'ಯಾಕಮ್ಮ ಈಗ ಬಿಟ್ಟೆ ಆಂದ್ರೆ, 'ಹೀ ಈಸ್ ಆಕ್ಟಿಂಗ್ ವಿಯರ್ಡ್' ಅನ್ನುವ ಒಂದೇ ವಾಖ್ಯದಿಂದ ಮಾಡಿದ ಪಾಪವನ್ನು ಕೈ ತೊಳೆದುಕೊಂಡ್ಯಲ್ಲ.. ನಾ ಹೇಗೆ ನಿನ್ನಲ್ಲಿಟ್ತಿದ್ದ ವಿಶ್ವಾಸದ ಪಾಪ ಕಳೆದುಕೊಳ್ಳಲಿ?

ಪ್ರಾಕ್ಟಿಕಲ್ ಆನೊ ಒಂದು ವಿಷಯ ನನಗೆ ತಿಳಿದದ್ದು ನನ್ನ ಕಾಲೇಜ್ ದಿನಗಳಲ್ಲಿ. ಅದೂ ಕೇವಲ ಭೌತ,ರಸಾಯನ,ಜೀವಶಸ್ತ್ರಗಳಲ್ಲಿ ಮಾತ್ರ. ಈ ತರಹ ಜೀವನದಲ್ಲಿ ನೀವು ತೀರಾ ಒಂದು ಜೀವದ ಮೇಲೆ ಪ್ರಯೋಗಿಸುತ್ತೀರಾ ಅಂತ ದೇವರಾಣೆ ಅಂದುಕೊಂಡಿರಲಿಲ್ಲ. ನಾವೆಲ್ಲ ಮಕ್ಕಳಾಗಿ ಆಡುತ್ತಿದ್ದಾಗ, ಒಂದು ಸುಳ್ಳು ನಿಜಾ ಮಾಡಲು ದೇವರಾಣೆ ಹಾಕುವಂತೆ, ನೀವು ಅಷ್ಟೇ ಸುಲಭವಾಗಿ 'ಪ್ರಾಮಿಸ್' ಮಾಡಿಬಿಟ್ಟಿರಿ. ಸ್ವಲ್ಪವೂ ಮರ್ಯಾದೆ ಇಲ್ಲದೆ ಹೇಗೆ ಜಾರಿಕೊಂಡಿರಿ, ನಿಮಗೆ ಸ್ವಲ್ಪವೂ ಮನಃ ಸಾಕ್ಷಿಯನ್ನುವುದಿಲ್ಲವೇ? ಅದು ಹೇಗೆ ಅಷ್ಟು ಸಲೀಸಾಗಿ ಎಲ್ಲವನ್ನೂ ಮರೆತು ಇಸೀಗೋಯಿಂಗ್ ಆಗಿ ಇದ್ದು ಬಿಡುತ್ತೀರಿ? ದೇವರು ನಿಮ್ಮಂಥವರ ಪಾಲಿಗೆ ಮಾತ್ರ ಇದ್ದಾನೆಯೇ? ನಮ್ಮಂಥ ಎಮೋಷನಲ್ ಹುಡುಗರನ್ನ ಕೇವಲ 'ಈಡಿಯಟ್' ಅಂತ ಅಂದ್ಕೋತನಾ? ಎಂತ ಕಥೆ? ನಿಜಕ್ಕೂ ನಿಮ್ಮ ದೆಸೆಯಿಂದ ದೇವರಿಗೆ ಅದೆಷ್ಟು ಬಾರಿ ಬೈದಿದ್ದೇನೆ. ನಿಮ್ಮ ಬುದ್ಧಿಗೇಡಿತನದಿಂದ ಅವನು ಬಯ್ಯಿಸಿಕೊಳ್ಳಬೇಕು. ನಿಮ್ಮಂಥ ಹುಡುಗಿಯರಿಂದ ಒಳ್ಳೆಯ ಹುಡುಗಿಯರೂ ಸಹ ತಲೆ ಎತ್ತಿ ಬಾಳಲಾರರು. ಯಾಕೆ ಹೀಗೆ ನೀವೆಲ್ಲ? ಸಚ್ ಆ ಡಿಸ್‌ಗ್ರ್ರೆಸ್!



ನನಗೆ ಒಳ್ಳೆಯ ಗೆಳತಿಯಿರಾದ್ದಾರೆ, ಗೆಳೆಯರಿದ್ದಾರೆ.. ನಿಮ್ಮಂತವರಿಂದ ಅವರಿಗೆ ದಿನವೂ ನನ್ನ ಬಗ್ಗೆ ಯೋಚಿಸಿ ತಲೆ ಕೆಡೆಸಿಕೊಳ್ಳುವಂತ ತಪ್ಪು ಮಾಡಿದ್ದೀರಿ. ಹಲವು ಬಾರಿ ಅಬ್ಬಾ ಫ್ರೆಂಡ್ಸ್ ಇನ್ನೂ ಇದ್ದಾರಲ್ಲ ಇಂಥ ಕೆಟ್ಟ ವ್ಯಕ್ತಿಗಳ ಮಧ್ಯೆ ಅನ್ನೋದು ಖುಷಿಯೂ ಕೊಡುತ್ತದೆ. ಇಷ್ಟ ಬಂದಾಗ ಆಟವಾಡಿ, ಕಷ್ಟ ಬಂದಾಗ ಟಾ ಟಾ ಹೇಳುವ ನಿಮ್ಮಂಥ ಚೀಟ್ ಗಳಿಂದಲೇ ನಿಜವಾದ ಸ್ನೇಹಿತ್ಯಾರರು ಆನೋದೊಂದು ಗೊತ್ತಾಗುವುದೇ ದೊಡ್ಡ ಅನುಕೂಲ.
ದಯವಿಟ್ಟು ಈ ರೀತಿ ಇನ್ನೊಂದು ಹುಡುಗನಿಗೆ ಮಾಡ್ಬೇಡಿ.. ಪ್ಲೀಸ್...!! ಹುಡುಗರನ್ನು ದೂರದಿಂದ ನೋಡಿ, ಕಾಮೆಂಟ್ ಮಾಡಿ, ಅವನ ಪಾಡಿಗೆ ಅವನನ್ನ ಇರಲು ಬಿಟ್ಬಿಡಿ.. ಮನಸ್ಸು ಒಬ್ಬರು ಆಡಿಹೋಗುವ ಆಟದ ಬಯಲು ಅಲ್ಲ.. ಯಾವುದೋ ಶಾಪಿಂಗ್ ಮಾಲ್ನಲ್ಲಿ ಟ್ರಯಲ್ ಮಾಡಿ ಬೇಡ ಅನ್ನುವ ಬಟ್ಟೆಯೂ ಅಲ್ಲ ಅನುವುದು ನೆನಪಿರಲಿ. ನಿಮ್ಮ ಲವ್ ಇರದಿದ್ದರೂ ಪರವಾಗಿಲ್ಲ. ಅವನ ಲೈಫ್ನ್ನ್ ಅವನೇ ಹೇಟ್ ಮಾಡುವಂತೆ ಮಾಡ್ಬೇಡಿ!

ಹುಡುಗ್ರೆ ನೀವು ಅಷ್ಟೇ.. ಹುಶಾರಾಗಿರಿ..! 

Monday, December 2, 2013

ಮಹಾ ಮರ್ಕಟಾಭೀಷೇಕ!!

ಬಹಳ ದಿನಗಳ ನಂತರ ಮನೆಯಿಂದ ಕರೆ ಬಂದಿತ್ತು..! "ಯಾವಾಗ ಮನೆಗೆ ಬರುತ್ತೀಯಾ? ಆಗಲೇ ೩ ತಿಂಗಳಾಯಿತು" ಎಂದು ಅಮ್ಮನ ಪ್ರಶ್ನೆ. ಊರೂರು ಸುತ್ತಿ ರಜೆ ಖಾಲಿಯಾಗಿತ್ತು. ರಜೆಗಾಗಿ ಕಾಯುವುದಕ್ಕೂ, ಆಫೀಸಿನಲ್ಲಿ ಹಟಾತ್ತಾಗಿ ನಾಲ್ಕು ದಿನ ರಜೆ ಸಿಗುವುದಕ್ಕೂ ಸರಿಯಾಗಿ, ಬೆಳಗ್ಗಿನ ಬಸ್ ಹತ್ತಿ ಊರಿಗೆ ನಡೆದಿದ್ದೆ. ಮನೆಯ ತಲುಪುವ ಮುನ್ನವೇ ಚಳಿಗಾಲದ ಆಗುಂಬೆ ಮನಸ್ಸಿನಲ್ಲಿ ಇಬ್ಬನಿಯ ಹಗುರವಾದ ಭಾವ ತುಂಬಿ ಮನೆಯ ಕೆಂಪುಮಣ್ಣಿನ ಹಸಿರು ಇಕ್ಕೆಲದ ಕಾಲುದಾರಿಯನ್ನು ಪದೇ ಪದೇ ನೆನೆಸುತಾ, ಮನೆಯನ್ನು ಯಾವಾಗ ತಲುಪುವೆನೋ ಎಂದು ಮನಸ್ಸು ಹಪಹಪಿಸುತ್ತಿತ್ತು. ಅಂತೂ ಇಂತೂ ಪ್ರಯಾಸದ ಪ್ರಯಾಣದ ಮಧ್ಯೆ ಬಾಲ್ಯದ ಗೆಳೆಯರು ಹಾಗೂ ಶಿಕ್ಷಕರನ್ನು ಬೆಟ್ಟಿಯಾಗಿ ಪಾನಿಪೂರಿಯ ಸವಿಯನ್ನು ತೀರ್ಥಹಳ್ಳಿಯಲ್ಲಿಯೇ ಸವಿದು, ಊರಿನ ಬಸ್ ಹತ್ತಿ ಮನೆಗೆ ತಲುಪುವಾಗ ಸಂಜೆ ೮ ಘಂಟೆ.
ಅಂಗಳಕ್ಕೆ ಕಾಲಿಡುತ್ತಲೇ ಅಡಿಕೆ ಸುಲಿತದ ದೃಶ್ಯ.. ಆದರೆ ಈ ಸಾರಿಯದ್ದು ಒಂದು ತರಹ ಬೇರೆಯದೇ ರೀತಿ, ಬೆರಳೆಣಿಕೆಯ ಜನ, ಮಾತಿಲ್ಲದ ನೀರವ ಮೌನ!!  ಮೊದಲೆಲ್ಲ ಅಂತಳದ ಆ ತುದಿಯಿಂದ ಈ ಮೂಲೆಯವರೆಗೂ ಎತ್ತ ಕಣ್ಣು ಹಾಸಿದರೂ ಜನವೋ ಜನ, ಗಲಾಟೆಯೋ ಗಲಾಟೆ!! ಕಿವಿಗೆ ಕಿಚಿ ಕಿಚಿ ಎನ್ನಿಸುವ ಅಡಿಕೆ ಸಿಪ್ಪೆ ಸುಲಿಯುವ ಚರ್ರ್ ಪರ್ರ್ ಎನ್ನುವ ಮನಕ್ಕೆ ಕಚಗುಳಿ ಇಡುವ ಹಿತವಾದ ಸದ್ದು. ಒಂದಷ್ಟು ಕೆಲಸಗಾರರ ಯಕ್ಷಗಾನದ ಪದಗಳು, ಇನ್ನೊಂದಷ್ಟು ಮಂದಿಯ ಜನಪದ ಹಾಡುಗಳು. ಅಡಿಕೆ ಸುಲಿತ ಮಲೆನಾಡಿಗರಿಗೆ ಒಂದು ತೆರನಾದ ಹಬ್ಬ ಇದ್ದಂತೆ! ಈಗಲೋ ಇರುವ ಯುವಕರೆಲ್ಲ, ಕೃಷಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ಪಟ್ಟಣದಲ್ಲಿ ಕೆಲಸ ಗಿಟ್ಟಿಸಿದ್ದರು.

ಜಗಲಿಗೆ ಧಾವಿಸುತ್ತಲೆ ಅಪ್ಪ ಹಾಗೂ ರಜನಿ(ಅಮ್ಮ) ಎದುರು ಬದುರು ಕುಳಿತು ಗೋಟಡಕೆಯನ್ನು ಸುಳಿಯುತ್ತಿದ್ದರು. ನೋಡಿದಾಕ್ಷಣ ಅವರು, "ಓಹೋಹೋ, ರಕ್ಷಿತ್ ಮಹಾರಾಜರು ಬರಬೇಕು, ಇತ್ತ ಧಾವಿಸಬೇಕು" ಎಂದು ರಜನಿ ನನಗೆ ಕಿಚಾಯಿಸಿದಳು. ನಾನು ಸುಮ್ಮನಿರದೆ, ಏನು ಅಪ್ಪನ ಎದುರಿಗೆ ಕುಳಿತು ಲೈನ್ ಹೊಡೀತಾ ಇದೀಯಾ ಅಂತ ತಿರುಗಿ ಕೆಣಕಿದೆ. ಸುಮ್ಮನೆ ಕುಳಿತಿದ್ದ ಅಪ್ಪ, "ಹೋಗಿ ಲುಂಗಿ ಉಟ್ಟು ಬಾ, ಗೋಣಿ ಚೀಲ ಕತ್ತಿ ರೆಡಿ ಇದೆ, ಮಾತು ಕಮ್ಮಿ ಮಾಡಿ ಅಡಿಕೆ ಸುಲಿ, ಎಂದಾಕ್ಷಣ ಮನೆಗೆ ಕರೆದ ಒಳಮರ್ಮ ಅರ್ತವಾಗಲು ನನಗೆ ಹೆಚ್ಚು ಸಮಯ ಹಿಡಿಯಲಿಲ್ಲ" ಎನ್ನಿ.

ಅಪ್ಪನ ಆಣತಿಯಂತೆ, ಮುಖ ತೊಳೆದು ಬೆಲ್ಲದ ಚಾ (ಅಡಿಕೆ ಸುಲಿತದ ಸ್ಪೆಷಲ್ ಟೀ) ಕುಡಿದು ಅಡಿಕೆ ಕತ್ತಿ ಗೋಣಿ ರೆಡಿ ಮಾಡಿ ಅಡಿಕೆ ಸುಳಿಯಲಿ ಅಪ್ಪ ರಜನಿಯ ಮಧ್ಯೆ ಕುಳಿತೆ. ನಿಧಾನವಾಗಿ ಹತ್ತು ಅಡಿಕೆ ಸುಳಿಯುತ್ತಲೆ, ಬೇಸರವಾಗಿ ಮಾತಿಲ್ಲದೆ ಕೂರಲಾಗಿ ಮೊದಲೆಲ್ಲ ದಯ್ಯದ (ದೆವ್ವ) ಕಥೆ ಹೇಳಿ ಮನದೊಳಗೆ ನಡುಕ ತರಿಸುತ್ತಿದ್ದ ಕೆಲಸದಾಳೊಬ್ಬನ ಹತ್ತಿರ, "ಏ ತಮ್ಮಣ್ಣ, ಒಂದು ದಯ್ಯದ ಕಥೆ ಹೇಳು ಮಾರಾಯ, ಕೆಳಾಣ" ಎಂದು ಭಿನ್ನವಿಸಿದೆ. ಪಕ್ಕದಲ್ಲೇ ಕುಳಿತಿದ್ದ ರಜಿನಿ, ಈಗ ದಯ್ಯ ಗಿಯ್ಯ ಏನು ಇಲ್ಲ ಮಾರಾಯ, ಎಲ್ಲ ಊರು ಬಿಟ್ಟು ಓಡಿಯೇ ಹೋಗಿದ್ದಾವೆ", ಎನ್ನಲು. ಕಾರಣ? ಎಂದು ನಾ ಕೇಳಿದೆ.
ಕೆಳಗೆ ಕುಳಿತಿದ್ದ ಮಂಜುನಾಥ, ಕೋಪೋದ್ರಿಕ್ತ ನಾಗಿ, "ಅಯ್ಯ, ಈ ಬ್ಯಾವರ್‌ಸಿ ಮಂಗಗಳನ್ನು ಫಾರೆಸ್ಟರ್‌ಗಳೆಲ್ಲ ಸೇರಿ, ಆಗುಂಬೆ ಕಾಡು ದೊಡ್ಡದು ಅಂತ ಇಲ್ಲಿ ಬಿಟ್ಟು ಹೋಗಿದ್ದಾರೆ. ಅವು ಬಂದಮೇಲೆ ದಯ್ಯ ಅಲ್ಲ ದೇವರೂ ನಮ್ಮೂರಲ್ಲಿ ಇರುವುದೋ ಬಿಡುವುದೋ ಅಂತ ಯೋಚನೆ ಮಾಡುತ್ತಿವೆ" ಎಂದ.
ಅದಕ್ಕೆ ನಾನು, ಯಾಕಪ್ಪಾ ನಿನಗೇನು ಮಾಡಿದವು ಅವು ಅಂತ ಕೇಳಲು, "ಅಯ್ಯ, ನಮ್ಮನೇಲಿ ಏನು ಅಡುಗೆ ಮಾಡಿದರೂ ಅದು ಮಂಗಕ್ಕೆ ಸಾಲುವುದಿಲ್ಲ. ಭಯಂಕರ ಲೂಟಿ ಮಾರ್ರೆ.. ಅದೆಷ್ಟೇ ಬಂದೈಬಸ್ತು ಮಾಡಿದರೂ, ನಮಗೂ ಮೀರಿ ಬುದ್ಧಿ ಉಪಯೋಗಿಸಿ ಪಾತ್ರೆಯನ್ನು ಬಿಚ್ಚಿ ಊಟ ಮಾಡ್ತವೆ. ಅದಷ್ಟೇ ಅಲ್ಲದೆ, ನಮ್ಮ ಯಂಕುಗೆ ಎರ್ಡು ಬಾರ್ಸಿ ಹೋಗ್ಯವೆ ಸೂಳೆ ಮುಂಡೇವು" ಎಂದ ಕೋಪದಿಂದ.
ಪಕ್ಕದಲ್ಲೇ ಕುಳಿತ ಅಪ್ಪ, "ಹೌದು ಮಾರಾಯ, ಮುಂದಿನ ಸಾರಿ ಗದ್ದೆ ಮಾಡುವುದಿಲ್ಲ.. ಈ ಮಂಗನ ಕಾಯುವುದೇ ಎರಡಾಳು ಹೆಚ್ಚಿನ ಕೆಲಸ. ಅವು ಬೇರೆ ಇತ್ತೀಚೆಗೆ ಭಾರೀ ಬುದ್ಧಿವಂತವಾಗಿವೆ. ಮೊದಲಿನ ಗುಂಡು ಹಾರಿಸಿದರೆ ಹೆದರುವುದಿಲ್ಲ. ನಮ್ಮ ತಮ್ಮಣ್ಣ ಒಂದು ಮಂಗ ಹೊಡೆದೂ ಗದ್ದೆಯ ಮರಕ್ಕೆ ನೇತು ಹಾಕಿಯೂ, ಅವಕ್ಕೆ ಭಯ ಬರಲಿಲ್ಲ. ರೈತ ಜನ್ಮ ಮಹಾ ಹಿಂಸೆ". ಎಂದರು.
ನಾನು ಅದಕ್ಕೆ, "ಅಪ್ಪ, ಮಂಗನನ್ನು ಹೊಡೆದರೆ ಪ್ರಾಣಿ ದಯಾ ಸಂಘದವರು ಗಲಾಟೆ ಮಾಡಿಯಾರು ಹುಷಾರ್ ಎನ್ನಲು, ಕೆಳಗೆ ಕುಳಿತ ತಮ್ಮಣ್ಣ, "ಯಾವ್, ದಯಾಸಂಘ, ಕರ್ಕು ಬಳ್ಳಿ ಅವನ್ನ, ಇಲ್ಲಿ ಬಂದು ಅವರ ಅಜ್ಜಂದ್ರನ್ನ ಕಾಯಲಿ ಬಡ್ಡಿ ಮಕ್ಕಳು" ಎಂದ ಕೋಪದಿಂದ.




ಕೊನೆಗೆ ನಾನೇ ನನ್ನ ಹಳೆಯ ಟ್ರಿಪ್ ಒಂದರಲ್ಲಿ ನೋಡಿದ ಅನುಭವವನ್ನ ಹಂಚಿಕೊಂಡೆ.
ತಮ್ಮಣ್ಣ, ಮಂಜುನಾಥ ಇದನ್ನ ಕೇಳಿ.. ಈ ಅಸ್ತ್ರ ಮಂಗನ ಮೇಲೆ ಪ್ರಯೋಗಿಸಿದರೆ ಏನಾದರೊಂದು ಆಗಬಹುದು. ನಾನು ೨ ವರ್ಷದ ಹಿಂದೆ ಮೇಕೆದಾಟು ಜಲಪಾತಕ್ಕೆ ಹೋದ ಸಮಯ. ಜಲಪಾತದ ಸನಿಹ ಒಂದಷ್ಟು ಪಡ್ಡೆ ಹೈಕಳು ಮೀನು ಹಿಡಿಯಾತ್ತಾ ಇದ್ದರೂ. ಪಕ್ಕದಲ್ಲೇ ಇದ್ದ ದಂಡೆಯ ಮೇಲೆ ಒಂದು ಥಮ್ಸ್ ಅಪ್ ಬಾಟಲ್ ಹಾಗೂ ಒಂದಸ್ತು ಕುರುಕುರು ತಿಂಡಿ. ಯಥಾ ಪ್ರಕಾರ ನಮ್ಮೂರಿನಂತೆಯೆ ಮಂಗನ ಕಾಟ. ಎರಡು ಗಡವಾ ಮಂಗಗಳು, ಹಟಾತ್ತನೆ ಥಮ್ಸ್ ಅಪ್ ಹಾಗೂ ತಿಂಡಿಯ ಮೇಲೆ ಧಾಳಿ ಮಾಡಿದವು. ತಿಂಡಿಯನ್ನೇನೋ ತಿಂದವು ಆದರೆ ಬಾಟಲಿ ಬಿಚ್ಚುವುದೇ ಒಂದು ಸಾಹಸದ ಕೆಲಸವಾಯ್ತು ಅವಕ್ಕೆ.
ಅಂತೂ ಇಂತೂ ಮರದಿಂದ ಬಾಟಲಿ ಕೈತಪ್ಪಿ ಕೆಳಗೆ ಬೀಳಲು ಮುಚ್ಚಳ ತೆರೆಯಿತು.. ನಾನೋ ನೀನೋ ಎಂದು ಎರಡೂ ಮಂಗಗಳು ಥಮ್ಸ್ ಅಪ್ ಕೂಡಿದವು. ಹತ್ತು ನಿಮಿಷ ಮರದಲ್ಲೇ ಸರ್ಕಸ್ ಮಾಡಿ, ಇದ್ದಕ್ಕಿದ್ದಂತೆ ೫ ನಿಮಿಷ ಸುಮ್ಮನೆ ಕುಳಿತವು.. ಆಮೇಲೆ ಕೇಳಪ್ಪ ಏನಾಯ್ತು ಅಂತ..!
"ಏನಾಯ್ತಯ್ಯ" ಎಂದರು ತಮ್ಮಣ್ಣ ಮಂಜುನಾಥ ಒಕ್ಕೊರಳಿನಿಂದ!!

ಎರಡೂ ಮಂಗಗಳು ಸಮಾ ಒಂದಕ್ಕೊಂದು ಕೊಟ್ಟುಕೊಂಡವು ಮಾರಾಯ. ಮಕಾ ತಿಕ ಎಲ್ಲಾ ಗಾಯ! ಆಮೇಲೆ ಸುಸ್ತಾಗಿ ಅಲ್ಲಿಂದಲ್ಲೇ ಕಂಬಿಕಿತ್ತವು!!

ಮಂಜುನಾಥ ಇದ್ದವ.. ಹಾಂಗಾರೆ ಥಮ್ಸ್ ಅಪ್ ಕೊಡಿಸ್ಬೇಕಾ ಈ ಮುಂಡೇವಕ್ಕೆ? ನಾನೇ ಕುಡಿದಿಲ್ಲ ಇವಕ್ಕೆ ಬೇರೆ".

ಅದಕ್ಕೆ ನಾ ಹೇಳಿದೆ. "ಅಲ್ಲ ಮಾರಾಯ. ಆ ಪಡ್ಡೆ ಹುಡುಗ್ರು ಬಿದ್ದು ಬಿದ್ದು ನಗಾಡ್ತಾ ಇದ್ರು. ಅಬ್ರು ಮೀನು ಫ್ರೈ ಮತ್ತೆ "ರಂ" ಹೊಡೆಯೋಕೆ ಅಂತ ಥಮ್ಸ್ ಅಪ್ ಬಾಟಲಿ ಒಳಗೆ 'ರಂ' ಮಿಕ್ಸ್ ಮಾಡಿದ್ದ್ದರಂತೆ! ಈ ಮಂಗಗಳು ಗೊತ್ತಿಲ್ಲದೆ ಕುಡಿದು ಕಿಕ್ಕಲ್ಲಿ ಚೆನ್ನಾಗೇ ಕೊಟ್ಕೊಂಡಿವೆ. ಅಷ್ಟೇ"

ಮಂಜುನಾಥ ತಮ್ಮಣ್ಣ ಇಬ್ಬರೂ ಜೋರಾಗಿ ನಕ್ಕು, ಈ ಬಾರಿ, ಮಂಗಗಳಿಗೆ ಎಣ್ಣೆ ಹೊಡೆಸೋದಂತೂ ಗ್ಯಾರಂಟಿ! ಅಂತ ಪ್ರತಿಜ್ಞೆ ಮಾಡಿದ್ದಾರೆ. ತಮ್ಮಣ್ಣ ಸ್ವತಹ ಎಣ್ಣೆ ಪ್ರೇಮಿ, ಎಷ್ಟು ಅವನ ಪಾಲೊ, ಎಷ್ಟು ಮಂಗನ ಪಾಲೊ ದೇವರೇ ಬಲ್ಲ. ಇಷ್ಟಾದ ಮೇಲೆ ಮಂಗಗಳೇ ಗಲಾಟೆ ಮಾಡಿಕೊಳ್ತವೋ, ಇವರಿಬ್ಬರಿಗೆ ಒದ್ದು ತಿಂಡಿ ಮಾಡಿಸಿಕೊಳ್ತವೋ ಅದು ಆ ಆಂಜನೆಯಂಗೆ ಗೊತ್ತು!!

ಜೈ ಹನುಮಾನ್, ನಿನ್ನ 'ಕುರ್ಪಾ' ಕಟಾಕ್ಷ ರೈತರ ಮೇಲೆ ಸಲ್ಪ ಕಡಿಮೆ ಮಾಡು ತಂದೆ ;)

Tuesday, October 9, 2012

ಪ್ರೀತಿ ಫಲ ಪ್ರತಿಫಲ ..


   
ಹಿಮಾಲಯದ ಸಮೀಪದ ಒಂದು ಹಳ್ಳಿ. ಅದು ಕಡು ಚಳಿಗಾಲದ ಒಂದು ಸಂಜೆ.. ಹಿಮಾಲಯದ ಸೌಂದರ್ಯ ನೋಡಬಯಸಿದ ವಿದೇಶಿ ನಡುವಯಸಿನ ಮಹಿಳೆಯೊಬ್ಬಳ ಲಕ್ಸುರಿ ಕಾರು ಪಂಖ್ಚರ್ ಆಗಿ ನಿಂತಿತ್ತು.




      ಸಹಾಯಕ್ಕಾಗಿ ಕೈ ಚಾಚಿ ಮೈ ಕೊರೆವ ಚಳಿಯಲ್ಲಿ ದಾರಿಹೋಕನೊಬ್ಬನಿಗೆ ಕಾದು ನಿಂತಿದ್ದಾಳೆ ಯಾರು ಬರುತ್ತಿಲ್ಲ. ಸೂರ್ಯ ಬೇರೆ ಮುಳುಗಿ ಪಡುವಣದಿ ಮಂಜು ಆವರಿಸಿ ಕತ್ತಲು ಚಳಿಯು ಸೀರಿ ರೌದ್ರ ನರ್ತನ ಮಾಡುತ್ತಿವೆ. ಅವಳ ಪರಿಚಯಸ್ತರಿಗೆ ಕರೆ ಮಾಡಬೇಕೆಂದರೂ ಆ ಕಡು ಕುಗ್ರಾಮದಿ ಸಂಪರ್ಕಕ್ಕೆ ದಾರಿಯೇ ಇಲ್ಲ. ಮುದುಡಿದ ಮುಖ ಹೊತ್ತು ಕಾಯುತ್ತಿರುವ ಹೊತ್ತಿಗೆ ದೂರದಲ್ಲಿ ದಪ್ಪ ಕಂಬಳಿಯ ಉಡುಗೆಯ ಹೊದ್ದ ಮಧ್ಯವಯಸ್ಕನೊಬ್ಬ ಇತ್ತ ಬರುತ್ತಿರುವುದು ಕಂಡಿತು. ಸಹಾಯಕ್ಕಾಗಿ ಕೂಗಿದವಳೇ ಸನ್ನೆಯ ಮೂಲಕ ತನ್ನ ಕಾರು ಕೆಟ್ಟು ನಿಂತಿದೆ ಎಂದಷ್ಟೇ ಹೇಳಿದಳು. ಆತನ ಹೆಸರು 'ಕುಂ ಚುಕ್'. ಕುಗ್ರಾಮವಾದರೂ ತಕ್ಕ ಮಟ್ಟಿಗೆ ಇಂತಹ ಸನ್ನಿವೇಶದಲ್ಲಿ ಪಳಗಿದ್ದ ಕುಂ ಚುಕ್ ತಕ್ಕ ಮಟ್ಟಿಗೆ ಇಂಗ್ಲೀಷ್ ಬಲ್ಲವನಾಗಿದ್ದ. ಮೇಡಂ ಜೀ, ನೀವು ಸರಿ ಎಂದರೆ ಕಾರನ್ನು ನಾ ಸರಿ ಮಾಡಬಲ್ಲೆ. ನಿಮಗೆ ಈ ಚಳಿ ತಡೆಯಲ್ಲಾಗದು. ಅಮ್ಮಾ, ನೀವು ಕಾರಿನಲ್ಲಿ ಕುಳ್ಳಿರಿ" ಎಂದೂ ಅವಳಿಗೆ ಧೈರ್ಯ ಹೇಳಿ, ಕಾರಿನ ಟೈರ್‌ನ್ನು ಸ್ವಲ್ಪ ಹೊತ್ತಿನಲ್ಲಿಯೇ ಬದಲಿಸಿ ಕೊಟ್ಟ. ನೋಡಲು ಕುಂ ಚುಕ್ ಮಧ್ಯ ವಯಸ್ಕನಾದರೂ ಆತನ ಕಂಗಳಲ್ಲಿ ಅದೇನೋ ಅದಮ್ಯ ಕಾಂತಿ, ಬಣ್ಣಿಸಲಾಗದ ದಯೆ ತುಂಬಿ ಬರುವಂತಿದ್ದ್ಡವು. ಉಡುಗೆಯಲ್ಲಿ ಬಡತನವೂ ತುಂಬಿತ್ತು. ವಿದೇಶಿ ಮಹಿಳೆ ಕೊಂಚವೂ ಯೋಚಿಸದೇ ೫೦೦ ರ ಇಪ್ಪತ್ತು ನೋಟುಗಳ ಕಂತೆಯೊಂದನು 'ಇಗೋ, ನಿನ್ನ ಸಹಾಯವ ಎಂದಿಗೂ ಮರೆಯಲಾರೆ. ನಿನ್ನನು ಸದಾ ನೆನೆಯುವೆ." ಎಂದಳು.




ಕುಂ ಚುಕ್ ಸ್ವಾಭಿಮಾನಿ, ಕೊಟ್ಟ ಹಣವನ್ನು ಅವರಿಗೆ ತಿರುಗಿ ನೀಡಿ, "ಇದು ನಮ್ಮ ಭಾರತೀಯ ಸಂಪ್ರದಾಯ. ಸಹಾಯ ಮನದ ಮೂಲೆಯಿಂದ ಮಾಡಿದಾಗ ಹಣ ಪಡೆಯಲಾರೆವು. ನಾ ನಿಮಗೆ ಸಹಾಯ ಮಾಡಿದಂತೆ, ಕಷ್ಟದಲ್ಲಿರುವ ಇನ್ನೊಬ್ಬರಿಗೆ ನೀವು ಸಹಾಯ ಮಾಡಿರಿ. ಆದರೆ ನೆನಪಿಡಿ, ನಿಮ್ಮ ಮನಸ್ಸು ನಿಮಗೆ ಸಹಾಯ ಮಾಡು ಅಂತ ತೋರಿದಲ್ಲಿ ಮಾತ್ರ ಸಹಾಯ ಮಾಡಿರಿ. ಹಾಗೆ ಮಾಡುವಾಗ ನನ್ನನು ನೆನೆದರೆ ಅಷ್ಟೇ ಸಾಕು. ನನಗೆ ಈ ಹಣ ವಾಪಸು ನೀಡಿದಂತೆ ಎಂದು ಹೇಳಿ ಸರ ಸರ ನಡೆದುಬಿಟ್ಟನು'. ಮಹಿಳೆಯ ಕಂಗಳಲ್ಲಿ ನೀರು ತುಂಬಿತ್ತು.




    ಹೊತ್ತಾಯಿತೆಂದು ಕಾರು ಚಾಲಿಸಿ, ಒಂದೈದು ಕಿಲೋಮೀಟರ್ ಮುಂದೆ ಹೋದ ಬಳಿಕ ಹೊಟ್ಟೆ ಹೊಟ್ಟೆ ಹಸಿದಂತಾಗಿ, ಹತ್ತಿರದ ಚಿಕ್ಕ ಜೊಪಒದಿಯಂತಹ ಹೊಟೆಲ್ ಎದುರಿಗೆ ಕಾರ ನಿಲ್ಲಿಸಿದ ಮಹಿಳೆ, ಜೋಪಡಿಯ ಒಳಹೊಕ್ಕು ಯಾರಾದರೂ ಇದ್ದಾರೆಯೇ ಎಂದು ಕರೆದಳು. ಕರೆ ಕೇಳಿ ಹೊರ ಬಂದಳು ೮ ತಿಂಗಳು ತುಂಬಿದ ಬಸುರಿ. ವಿದೇಶಿ ಮಹಿಳೆ 'ಇಲ್ಲಿ ಊಟ ಸಿಗುವುದೇ ಎಂದು ವಿಚಾರಿಸಲು', ಐದು ನಿಮಿಷದಲ್ಲಿ ಅವಳಿಗೊಪ್ಪುವಂಥ ಚಪಾತಿಯ ಒಳಗೆ ಬೇಯಿಸಿದ ಆಲೋ,ಮೆಣಸು,ಈರುಳ್ಳಿ ಬೆಳ್ಳುಳ್ಳಿಯ ಹದವಾದ ಮಿಶ್ರಣದ ನಾಲ್ಕು ರೋಲ್‌ಗಳನ್ನು ಸಿಹಿ ಚಟ್ನಿಯೊಂದಿಗೆ ನಿಧಾನವಾಗಿ ನಡೆಯುತ್ತಾ ತಂದಿತ್ತಳು. ರೋಲ್ ಗಳ ಅದಮ್ಯ ರುಚಿಗೆ ಮನ ಸೋತ ಮಹಿಳೆ ಮನೆಯ ಪರಿಸ್ಥಿತಿಯನ್ನು ಗಮನಿಸಿ, 'ಅಯ್ಯೋ, ಇಂಥ ಸುಂದರ ಮಹಿಳೆಗೆ ಯಾಕಿಂತಹ ಸ್ಥಿತಿ. ಆ ದೇವರು ಯಾಕೆ ಹೀಗೆ ಎಂದು' ನೆನೆಯುತ್ತಾ ಅವಳು ನೀಡಿದ ಬಿಲ್ ಚೀಟಿಯ ಕೆಳಗೆ ಅದೇ ೫೦೦ ರ ಇಪ್ಪತ್ತು ನೋಟುಗಳಾನಿತ್ತು 'ಕುಂ ಚುಕ್, ನಿನ್ನ ಮಾತಿನಂತೆ ನನ್ನ ಮನಸಾರೇ ಈ ಹಣವನು ಇವಳಿಗೆ ನೀಡುವೇ ಎಂದು ಮನದಲ್ಲೇ ಅಂದುಕೊಂಡು ಬಿಲ್ ಚೀಟಿಯ ಕೆಳಗೆ ಬೇಗ ಬೇಗನೆ ನಾಲ್ಕು ಸಾಲುಗಳನು ಬರೆದು, ಕಾರನ್ನೇರಿ ಹೊರಟೆಹೋದಳು.

ಒಳಗಿಂದ ಧಾವಿಸಿದ ತುಂಬಿದ ಬಸುರಿ ಚೀಟಿಯ ಕೆಳಗೆ ಇದ್ದ ಗರಿ ಗರಿ ನೋಟುಗಳ ನೋಡಿ ಧಿಗ್ಬ್ರಾಂತಿಯಿಂದ 'ಏನಿದು,ಇಷ್ಟೊಂದು ಹಣ? ಯಾಕೆ? ಹೇಗೆ ಅವಳಿಗೆ ಇದನ್ನು ವಾಪಸ್ಸು ನೀಡಲಿ ಎಂದು ಬಿಲ್ ಚೀಟಿ ತಿರುಗಿಸೆ ನೋಡಲು ಹೀಗೆ ಬರೆದಿರುತ್ತದೆ.

"ಪ್ರಿಯ ಮಿತ್ರೆ, ನೀ ನೀಡಿದ ಊಟದ ಸವಿ ನನಗೆ ಇನ್ನೆಲ್ಲೂ ದಕ್ಕಿಲ್ಲ. ಮನಸ್ಸಿಗೆ ಯಾಕೋ ನೀನು ಕಷ್ಟದಲ್ಲಿರುವೆ, ಸಹಾಯ ಮಾಡಲೇಬೇಕೆಂದು ಈ ಹಣವನ್ನಿಟ್ಟಿದ್ದೇನೆ. ಇದನ್ನು ಸದುಪಯೋಗ ಮಾಡಿಕೊ, ನಿನಗೇನಾದರೂ ಇದನ್‌ನ್ನು ವಾಪಸ್ಸು ಮಾಡಬೇಕೆಂದಿದ್ದಲ್ಲಿ ದಯವಿಟ್ಟು ಅವಶ್ಯರಿಗೆ ಕಷ್ಟದಲ್ಲಿದಾಗ ನೀಡು. ಇದು ನಾ ಭಾರತೀಯನೊಬ್ಬನಿಂದ ಕಲಿತ ಸಂಸ್ಕೃತಿ ಎಂದಷ್ಟೇ ಬರೆದಿರುತ್ತದೆ".

ಕನ್ಣಾಳಿಯಲ್ಲಿ ನೀರು ತುಂಬಿ ಬಂದು.. ಸ್ವೆಟರ್ ನ ಮೂಲೆಯಿಂದಲೇ ಅರಿಯದಂತೆ ಒರೆಸಿಕೊಂಡು ಮನೆಗೆ ಗಂಡ ಬರಲೆಂದು ಕಾಯುತ್ತಿರುವಾಗಲೇ ಅವಳ ಗಂಡ ಬರುತ್ತಾನೆ. ಬಾಗಿಲಲ್ಲೇ ಆತನನ್ನು ತಬ್ಬಿ ಎದೆಗೆ ಮುತ್ತನಿತ್ತು, "ನನ್ನ ಹೆರಿಗೆಗೆಂದು ನೀ ಇನ್ನು ಕಷ್ಟ ಪಡಬೇಕಿಲ್ಲ. ಇಲ್ಲಿ ನೋಡು ಯಾರೋ ವಿದೇಶಿ ತಾಯಿ ನೀಡಿದ ಈ ಹಣ. ಇದೋ ಈ ಚೀಟಿ ಓದು" ಎಂದಾಗಲೇ ಸರ ಸರ ನೇ ಚೀಟಿ ಓದಿದ ಗಂಡ ನ ಕಣ್ಣಲೂ ಆನಂದ ಬಾಷ್ಪ. ಆತ ಬೇರೆ ಯಾರು ಅಲ್ಲಾರೀ, 'ನಮ್ಮ ಕುಂ ಚುಕ್'.

- ಎಲ್ಲೋ ಓದಿದ್ದು, ಇಂಗ್ಲೀಷ್ ನಿಂದ ಅನುವಾದಿಸಿದ್ದು.

.