Friday, May 9, 2014

ರಿಲೆಶನ್ಸ್ ಕನ್ಫ್ಯುಶನ್ಸ್... !!

ವರ್ಷಗಳ ಹಿಂದೆ ಓದಿದ ಕವಲು ಕಾದಂಬರಿ ಅದ್ಯಾಕೋ ಇಂದು ತುಂಬಾ ಕಾಡುತ್ತಿದೆ. ಟೀವಿಯಲ್ಲಿ ಈ ಸಂಜೆ ಯಾಕಾಗಿದೆ ನೀನಿಲ್ಲದೆ ಹಾಡು ಚಾಲೂ ಇದೆ.. ಹಾಡು ಮುಗಿದು ಮತ್ತೊಂದು ಗೀತೆ... 'ನಿನ್ನಿಂದಲೇ ನಿನ್ನಿಂದಲೇ.. ಕನಸೊಂದು ಶುರುವಾಗಿದೆ' ಹಾಡು ಮನದಾಳದಲ್ಲಿ ಬೇರೂರುತ್ತಿದೆ. ಆದರೆ ನೀನೇ ಇಲ್ಲ. ಮನೆಮಂದಿಯೆಲ್ಲ ಸಡಗರವಾಗಿ ಏನೋ ನನಗೆ ಮದುವೆ ಮಾಡ್ಬೇಕೆಂದು ನಿನ್ನ ತೋರಿಸಿ ಮಾತೆಲ್ಲ ಮುಗಿದು ನೀನು ದಿನಾ 'ನೀವೇ ನಂಗೆಲ್ಲಾ' ಅಂತ ಹುಸಿ ಪ್ರಾಮಿಸ್ ಮಾಡಿ ಎರಡೇ ವಾರದಲ್ಲಿ ಟೈಂ ಪಾಸ್ ಮಾಡಿ ಕೈ ಕೊಟ್ಟಮೇಲೆ ಒಂದು ಕೊಡುಗೆ ಕೊಡಬೇಕಲ್ಲ. ಇಗೋ ಈ ಬರಹ ನಿನಗೆ ಸಮರ್ಪಣೆ.
ನೀ ಈ ತರ ಗುಮ್ಮನ ತರ ಬೇಜಾರ್ ಮಾಡ್ಕೊಂಡ್ ಕೂರ್ಬೆಡವೊ, ನಿನ್ನ 'ಮ್ಯಾನರಿಸ್ಮ್' ಇದು ಸರಿ ಹೊಂದುವುದಿಲ್ಲ. ನೀನು ಬಿಂದಾಸ್ ಆಗಿದ್ರನ್ನೇ ಚೆಂದ ಅಂತ ನನ್ನಲ್ಲಿ ಹುಮ್ಮಸ್ಸು ತುಂಬಿಸಿದ ನನ್ನ ತಮ್ಮನಿಗೆ ಈ ಬರಹ ಸಮರ್ಪಣೆ..
ಲೇ, ಬೀ ಎಂ ಟಿ ಸಿ ಹೋದರೆ ವೋಲ್ವೋ ಬರುತ್ತೆ ಹೋಗೋ. ಹೋಗಿದ್ದು ಒಳ್ಳೆಯದಕ್ಕೇ, ಇವತ್ತಲ್ಲ ನಾಳೆ ಕೈ ಕೊಡೋವ್ರು ಬೇಡ. ನಿನಗೆ ಒಳಿತು ತರುವ ಒಳ್ಳೆಯ ಹುಡುಗಿಯೇ ಸಿಗುತ್ತಾಳೆ ಅಂತ ಸಮಾಧಾನ ಹೇಳಿದ ನನ್ನ ಗೆಳೆಯರಿಗೆ ಈ ಬರಹದ ಸಮರ್ಪಣೆ.
ಮನೆಗೆ ಫೋನ್ ಮಾಡಿ, 'ಅಪ್ಪ, ನನ್ನ ಬಗ್ಗೆ ಇಲ್ಲಸಲ್ಲದ ಕಥೆಯಲ್ಲ್ಲ ಹೇಳಿದಳು ಅಂತ ಕಣ್ಣೀರು ಹಾಕಿದಾಗ. 'ತೋ.. ಹೇಸು ಮನುಷ್ಯ. ನೀನು ಗಂಡಸು. ಕಣ್ಣೀರು ಶೋಭೆ ತರುವುದಿಲ್ಲ. ಹೆದರಿಸಬೇಕು. ಹೆದರಬಾರದು' ಅಂತ ಧೈರ್ಯ ಹೇಳಿದ ಅಪ್ಪನಿಗೆ ಈ ಬರಹದ ಸಮರ್ಪಣೆ.

ಇರಲಿ.. ಯಾವ ವಿಷಯ ಅಂತ ಆಗಲೇ ನೀವು ತಲೆ ಕೆರೆದುಕೊಳ್ಳಬಹುದು. 'ಸಂಬಂಧಗಳು'. ಹೌದು.. ತೀರಾ ಸಾಮಾನ್ಯ ವಿಷಯ ಅಲ್ಲ್ವಾ? ಹೌದು.. ಆದರೆ ಅದರ ಹಿಂದಿನ ಒಂದು ಜಗತ್ತು? ತೀರಾ ನಿಗೂಢ!! ಒಂದು ಮಟ್ಟಿಗೆ ಹೇಳುವುದಾದರೆ ಟಿ ವಿ ೯ 'ಹೀಗೂ ಉಂಟೆ' ತರಹ.

ವರ್ಷದ ಹಿಂದೆ ಇದರ ಬಗ್ಗೆ ಸ್ವಲ್ಪವೇ ಬರೆದಿದ್ದೆ. ಗೆಳೆಯನೊಬ್ಬ ಅದಕ್ಕೆ ಒಂದಷ್ಟು ಸೇರಿಸಿ ಚೆನ್ನಾಗಿಯೇ ಬರೆದಿದ್ದ. ಮನಸ್ಸಿಗೆ ಹಿಡಿಸುವ ಹಾಗೆ!

ಉದಾಹರಣೆಗಳು:.
ಮೊದಲನೆಯದು:
ಮಲೆನಾಡ ಕರೆಂಟ್ ತರಹ: ದಿನಕ್ಕೆ ೧೨ ಗಂಟೆ ಪವರ್ ಕಟ್... ಕೆಲವು ಸಂಬಂಧಗಳು ಕೂಡ ಇದೆ ತರಹ ಅರ್ಧ ದಿನ ಇಮ್ಮಡಿ ಪ್ರೀತಿ.. ಇನ್ನರ್ಧ ದಿನ ಪೂರ್ತಿ ಜಗಳ.. ಮುನಿಸು.. ಇರಿಸು ಮುರಿಸು.. ಅಪ್ಪಿ ತಪ್ಪಿ ನೀವು ಮದ್ಯೆ ಹೋದ್ರೋ ನಿಮ್ಮ ಕಥೆ ಮುಗಿಯಿತು. ಇಬ್ಬರೂ ಸೇರಿ ನಿಮ್ಮ ಮೇಲೆಯೇ ಮುಗಿಬೀಳುತ್ತಾರೆ. ಇದೊಂದು ತರ ನಮ್ಮ ಅಪ್ಪ ಅಮ್ಮನ ತರಹ. ಸಂಸಾರದ ಸಾಮರಸ್ಯ ಅಂತ ಹೇಳಬಹುದು. ಏಳು ಬೀಳುಗಳ ನಡುವೆ ಕರೆಂಟ್ ಬರುವುದಂತೂ ಗ್ಯಾರಂಟಿ.

ಎರಡನೆಯದು:
ಮಲೆನಾಡ ಕರೆಂಟ್ (ಮಳೆಗಾಲದಲ್ಲಿ).. ದೇವರೇ.. ಈ ತರಹ ಸಂಬಂಧಗಳು ಶತ್ರುವಿಗೂ ಬೇಡ. ಇದೊಂಥರಾ ಬಾಯ್ಫ್ರೆಂಡ್ ಗರ್ರ್ಲ್ಫ್ರ್ಫ್ರೆಂಡ್ ನಡುವೆ ಇನ್ಯಾವುದೋ ಹುಡುಗ ಹುಡುಗಿ ಬಂದಾಗ ಆಗುವ ರೀತಿ. ಒಂದು ಸರಿ ಅನುಮಾನ ಮನಸ್ಸಿನಲ್ಲಿ ಹೊಕ್ಕಿತೆಂದರೆ ಅದು ಯಾವಾಗ ಸರಿ ಆಗುವುದೋ ಆ ದೇವರಿಗೂ ಸಹ ಗ್ಯಾರಂಟಿ ಇಲ್ಲ.
ಇದು ಸಾಲ ಕೊಟ್ಟ ಜನಕ್ಕೂ ಅನುವಹಿಸುವುದುಂಟು.. ನೀವು ಯಾರನ್ನ ನಂಬಿ ಸಹಾಯ ಮಾಡುತ್ತೀರೋ ಅವರು ಹೇಳಿದ ಸಮಯಕ್ಕೆ ಹಣ ವಾಪಸ್ ಕೊಡುವುದೇ ಇಲ್ಲ. ಹಣ ಕೊಟ್ಟಾಗ ಮಾತ್ರ ಹಿರಿ ಹಿರಿ ಹಿಗ್ಗಿದ ಮನುಷ್ಯ ವಾಪಸ್ ಕೇಳುವಾಗ 'ಪತ್ತೆಯೇ ಇರುವುದಿಲ್ಲ', ಅಥವಾ ಅದ್ಯಾವ ಊರಲ್ಲಿ ಇರುವನೋ.. ಇದ್ದರೂ ನಿಮ್ಮ ಫೋನ್ ರಿಸೀವ್ ಮಾಡುವುದಿಲ್ಲ. ಕೊನೆಗೆ ನೀವೇ ಸುಸ್ತಾಗಿ 'ಸಾಯ್ಲಿ ಎಲ್ಲಾದ್ರೂ.. ಹಣ ಹೋಯಿತು'ಎಂದಾಗ ಯಾವತ್ತೋ ಒಮ್ಮೆ ಅವನೇ ನಿಮಗೆ ಕರೆ ಮಾಡುವ.. 'ಲೆ.. ಸಾರಿ.. ಅವತ್ತು ಫೋನ್ ಎತ್ತೋಕ್ ಆಗಿಲ್ಲ. ಸ್ವಲ್ಪ ಹಣದ ಸಹಾಯ ಸಿಗಬಹುದಾ?' ಅಂತ..!!
ನಮ್ಮೂರ್ ಕರೆಂಟ್ ಕೂಡಾ ಹೀಗೆಯೇ ಮಳೆಗಾಲದಲ್ಲಿ.. ಹೋದರೆ ಅದೆಷ್ಟೋ ದಿನ ಆದಮೇಲೆ ಒಮ್ಮೆ ಬರುತ್ತದೆ!

ಮೂರನೆಯದು:
ದನದ ಕೊಟ್ಟಿಗೆಯ ಮೂಲೆಯಲ್ಲಿ ಉರಿಯುವ ಮುರಿನ ಕೊಟ್ಟಿಗೆಯ ಬೆಂಕಿಯ ಕೆಂಡದಂತೆ! ಬೂದಿ ಮುಚ್ಚಿದ ಕೆಂಡ..!!
ಇದು ಸಾಮಾನ್ಯವಾಗಿ ನಿಮ್ಮ ನಿಮ್ಮ ನೆಂಟರಿಷ್ಟ್ರಿಗೆ ಹೋಲಿಸಬಹುದು.. ನಿಮ್ಮನ್ನು ತುಂಬಾ ಪ್ರೀತಿಸುವಂತೆ ಹೊರಗಿನಿಂದಲೇ ನಟಿಸುತ್ತಾ.. ಒಳಗಿನಿಂದ 'ಹೆಂಗಾದ್ರೂ ಮಾಡಿ ಇವನಿಗೆ ಹೊಗೆ ಹಾಕ್ಬೇಕಲ್ಲ' ಅಂತ ಕಾಯ್ತಾ ಇರುತ್ತಾರೆ. ಸರಿಯಾದ ಸಂದರ್ಭ ನೋಡಿ ನಿಮಗೆ ಚೆನ್ನಾಗಿ ಹೊಗೆ ಹಾಕ್ತಾರೆ. ಆವಾಗ್ಲೇ ನಿಮಗೆ ಗೊತ್ತಾಗುವುದು.. ಓ.. ಕೆಂಡ ಉರಿತಾ ಇತ್ತು ಒಳಗೆ. ಇಷ್ಟು ದಿನ ಬರೀ ಬೂದಿ ಇತ್ತು ಅಂತ ತಪ್ಪು ತಿಳ್ಕೊಂಡಿದ್ದೆ ಅಂತ.. ಅಲ್ವಾ?
ಇದು ಹುಡುಗಿಯರಿಗೆ ಜಾಸ್ತಿ ಆಗುವುದುಂಟು.. ತುಂಬಾ ಫ್ರೆಂಡ್ಸ್ ಆಗಿರೋರೆ ಒಬ್ಬಳಿಗೆ ಒಳ್ಳೆ ಬಾಯ್‌ಫ್ರೆಂಡ್ ಸಿಕ್ಕರೆ ಒಳಗೆ ತಂಗ್ಯಾಕಿಲ್ಲ ಅಂತ ಅಸೂಯೆ ಪಡುತ್ತಿರುತ್ತಾಳೆ.. ಚಾನ್ಸ್ ಸಿಕ್ಕರೆ ಅದಕ್ಕೊಂದು ಹೋಮ ಖಂಡಿತ.

ನಾಲ್ಕನೆಯದು:
ಬಸ್.. ಟ್ರೈನ್ ಟಿಕೆಟ್ ತರಹ.. ಪ್ರಯಾಣ ಆಗುವ ವರೆಗೆ ಮಾತ್ರ..
ಇದು ಸದ್ಯದ ಜಗತ್ತಿನ ಹುಡುಗ ಹುಡುಗಿಯರ ರಿಲೇಶನ್ಸ್ ಗೆ ಸರಿಹೊಂದುವುದು.. ತೀರಾ ಸಾಮಾನ್ಯವಾಗಿ ಪ್ರಯಾಣಿಕರಂತೆ ಪರಿಚಯವಾಗುವ ಇವರು ಯಾರು ಎಲ್ಲಿಗೆ ಟಿಕೆಟ್ ತಗೊಂಡಿರುವರು ಅಂತ ಪ್ರಶ್ನಿಸುವುದೇ ಇಲ್ಲ. ಓಕೆ.. ನೋಡೋಣ ಪ್ರಯಾಣ ಇರುವ ವರೆಗೆ ಆರಾಮಾಗಿ ಇರುವ ಅಂತ ಶುರು ಮಾಡಿಕೊಳ್ಳುವರು. ಇಳಿಯುವ ಜಾಗ ಬಂದಾಗಲೇ ತಿಳಿಯುವುದು ಎಷ್ಟು ಕಷ್ಟ ಅಂತ... ಯಾರು ಮೊದಲು ಇಳಿಯುತ್ತಾರೋ..ಅವರು ಟಿಕೆಟ್ ಎಸೆದು ಆರಾಮಾಗಿ ಜಾಗ ಖಾಲಿ ಮಾಡುವರು.. ಒಬ್ಬರೇ ಉಳಿದವರಿಗೆ ಸ್ವಲ್ಪ ಕಾಲ ಒಂಟಿತನ ಕಾಡುವುದು ಕಟ್ಟಿಟ್ಟ ಬುತ್ತಿ.
ಇದು ಇಲ್ಲಿ ಹಲವರಿಗೆ ಖಂಡಿತ ಆಗಿಯೇ ಆಗಿರುತ್ತದೆ.. ಆದರೆ ಹೇಳಿಕೊಳ್ಳುವುದಿಲ್ಲ.

ಐದನೆಯದು.
ಆಟೋ ಪ್ರಯಾಣದ ರೀತಿ..
ಶಾರ್ಟ್ ಟರ್ಮ್.. ಫಾಸ್ಟ್ ಎಂಡ್ ಫ್ಯೂರಿಯಸ್.. ಎಲ್ಲಿಗೆ ಹೋಗಬೇಕು ಎಷ್ಟು? ಹೈ ಫೈ ಸೊಸೈಟಿಯ ಜನರು ಫಾಲೋ ಮಾಡುವ ಸಂಸ್ಕೃತಿ.. ನನಗೆ ಇಷ್ಟೇ ಬೇಕು.. ಇದರ ಮುಂದೆ ನನಗೂ ನಿನಗೂ ಸಂಬಂಧವಿಲ್ಲಾ. ಮಾನಸಿಕವಾಗಿ ನನಗೆ ನಿನಗೆ ಯಾವ ರೀತಿಯ ಸಂಭಂಧಗಳೂ ಇಲ್ಲ.. 'ಐ ವಾಂಟ್.. ಯೂ ವಾಂಟ್'.. ಲೆಟ್ಸ್ ಬೀ ಫ್ರೆಂಡ್ಸ್ ವಿತ್ ಬೆನಿಫಿಟ್ಸ್. ಇಟ್ಸ್ ಓವರ್.

ಆರನೆಯದು..
ಐಸ್ ಕ್ರೀಮ್.. ಫಾಸ್ಟ್ ಫುಡ್ ಏನಾದರೂ ಅಂದುಕೊಳ್ಳಿ..
ಅದು ಆ ಸ್ಥಿತಿಯಲ್ಲಿದ್ದಾಗಳಷ್ಟೆ ಚೆಂದ.. ನಮ್ಮ ರಾಜಕಾರಣಿಗಳಂತೆ.. ಚುನಾವಣಾ ಸಮಯ ಬಂದಾಗಲೇ ಅವರು ಬಗ್ಗಿ ನಡೆಯುವುದು... ನಿಮ್ಮಿಂದ ಅವರಿಗೆ ಏನೋ ಸಹಾಯವಾಗುವುದಿದೆ ಅಂತ ನಿಮಗೆ ಅರಿವಾದಾಗಲೇ ನೀವು ಕೆಲಸ ಮಾಡಿಸಿಕೊಳ್ಳಬೇಕು. ಈಗಿನ ಕಾರ್ಪೊರೇಟ್ ಪ್ರಪಂಚದಲ್ಲೂ ಅನ್ವಯವಾಗುತ್ತದೆ. ನಿಮ್ಮಿಂದ ಏನೋ ಆಗುವುದಿದೆ ಅಂದರೆ ಮಾತ್ರ ಜನ ನಿಮ್ಮಲ್ಲಿಗೆ ಬರುತ್ತಾರೆ. ನಿಮ್ಮ ಕೆಲಸ ಮಾಡಿಕೊಂಡಿರೋ ಬದುಕಿದಿರಿ... ಇಲ್ಲವೆಂದರೆ ಗೊತ್ತಲ್ಲ? ಐಸ್ ಕರಗಿದ ಮೇಲೆ ಪಾನಿ ಪೂರಿ ಆರಿದಮೇಲೆ? ಉಹೂಂ.. ನೋ ಯೂಸ್..!

ಕೊನೆಯದು:
ಮೇಣದ ಬತ್ತಿಯಂತೆ..
ನೀವು ಇರುವವರೆಗೆ ನಿಮ್ಮ ಹಣದಲ್ಲಿ ಮಜಾ ಮಾಡಿ.. ನಿಮ್ಮ ಬೆಳಕಲ್ಲಿ ಅವರು ತಮಗೆ ಬೇಕಾದ ಕೆಲಸವನ್ನೆಲ್ಲಾ ಮಾಡಿಕೊಂಡು ನಂತರ ತಮಗೆ ಸಂಬಂಧವೇ ಇಲ್ಲದಂತೆ ನಿಮ್ಮನ್ನು ನಂದಿಸಿ ಆರಾಮಾಗಿ ಹೊದಿಗೆ ಹೊದ್ದು ಮಲಗುವ ಜನರು.. ನಂದಿಹೋದಮೇಲೆಯೇ ನಿಮಗೆ ಗೊತ್ತಾಗುವುದು.. ಚೆ.. ಆಯ್ತಲ್ಲ ನನ್ನ ಉಪಯೋಗ!!

ಹೀಗೆ ಪ್ರಪಂಚ ಬಹಳ ಬೇಗ ಬೆಳೆದಂತೆ.. ಸಂಭಂಧಗಳಿಗೆ ಬೆಲೆ ಕೂಡ ಇಲ್ಲವಾದಂತಾಗಿದೆ. ತೋಳಲ್ಲೇ ಹೊತ್ತು ಮಗುವಿನ ಮೈ ಶಾಖ ಕೊಡುತ್ತಿದ್ದ ಭಾರತೀಯ ಮಹಿಳೆ ಮಗುವಿಗೆ ಗಾಡಿಯಲ್ಲಿ ಕೂರಿಸುವ ಕಾಲವೂ ಬಂದಿದೆ.. ಮನೆಯಲ್ಲಿಯೇ ಆಡಿ ಬೆಳೆದು ಮನೆಯ ಮೌಲ್ಯ ತಿಳಿವ ಮಗುವನ್ನು 'ಪ್ಲೇ ಹೋಮ್' ಲೀ ಗುಮ್ಮನಂತಾಗಿಸುವ ಕಾಲವೂ ಬಂದಾಗಿದೆ. ಸದ್ಯ ನಮಗಾದರೂ ಇಂಥ ಜನುಮ ಬರಲಿಲ್ಲವಲ್ಲ ಎಂಬುದೇ ಒಂದು ಅದೃಷ್ಟದ ಮಾತು..

ನೋಡಿ.. ನಿಮಗೇನಾದರೂ ಹೊಳೆದಲ್ಲಿ ನೀವು ಈ ಬರಹಕ್ಕೆ ಸ್ವಲ್ಪ ಸೇರಿಸಿ.. ತಪ್ಪಿದ್ದಲ್ಲಿ ಕ್ಷಮಿಸಿ.. 'ಸರ್ವೇ ಜನಾಃ ಸುಖಿನೋ ಭವಂತು'!

ಸಂಬಂಧಗಳಿಗೆ ಬೆಲೆ ಬರಲಿ.. ಹಣಕ್ಕೆ ಇಲ್ಲದಿದ್ದರೂ ಬೇಡ... ಅಲ್ಲವಾ

2 comments:

  1. SambhandagaLa definitions matte examples thumba chennagide.. Very well written!

    ReplyDelete