Saturday, December 17, 2011

ಶಿಕ್ಷಣ ಎಂಬ ದ್ವಂದ್ವ ನೀತಿ...

             ಶಾಲಾ ದಿನಗಳು ಎಂದಿಗೂ ಮರೆಯಲಾಗದ ಕ್ಷಣಗಳು.. ಗಡಿಯಾರವನಾದರೂ ಹಿಂದೆ ತಿರುಗಿಸಬಹುದು ಆದರೆ ಬಾಲ್ಯವನ್ನು ಮಾತ್ರ ಹಿಂದೆ ತರಲು ಎಂದಿಗೂ ಸಾಧ್ಯವಿಲ್ಲ..  ಶಿಕ್ಷಣದ ಬಗ್ಗೆ ಬರೆಯಲು ಹೋಗಿ "ಏನಪ್ಪಾ ಇವ ಈ ತರ ಕೊರೀತ ಇದಾನೆ" ಅಂತ ನೀವು ಅಂದ್ಕೊಂಡ್ರೆ ಅದ್ರಲ್ಲಿ ನಿಮ್ಮ ತಪ್ಪಿಲ್ಲ ಬಿಡಿ. ಈ ವಿಷ್ಯದ ಬಗ್ಗೆ ಬರ್ಯೋಕೂ ಒಂದು ಕಾರಣ ಇದೆ. ಕಾರಣ ಇಲ್ದೇ ಯಾರು ಏನನ್ನೂ ಬರ್ಯೂದು ಇಲ್ಲ, ಯಾವ ಕೆಲ್ಸಾನೂ ಮಾಡೋದಿಲ್ಲ. ಹೌದು ತಾನೆ?

          ಮೊನ್ನೆ ಮೊನ್ನೆ ಖಾಸಗಿ ಚಾನೇಳಿನಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಬೇಕಾದಾಗ ಶಿಕ್ಷೆಯನ್ನೇ ಕೊಡಬಾರದು ಎಂದು ಹಳ್ಳಿಯ ಶಾಲೆಯ ತೋರಿಸಿದ್ದೆ ನಂಗೆ ಬರೆಯಲು ತುರಿಕೆ ಬರಿಸಿದ ವಿಷಯ..





        "ಗಿಡವಾಗಿ ಬಗ್ಗದು ಮರವಾಗಿ ಬಗ್ಗೀತೇ"? ಅಂತ ಹಿರಿಯರು ತಿಳಿಹೇಳುವುದುಂಟು.. ಅದು ಅಕ್ಷರಶಃ ಸತ್ಯವಾದ ಮಾತು. ಎಷ್ಟು ಜನ ನಿಮ್ಮಲ್ಲಿ ಹಳೆ ಮೇಷ್ಟರ ಹತ್ತಿರ ಪೆಟ್ಟು ತಿಂದೂ ಬುದ್ಧಿ ಕಲಿತೋ ಕಲಿಯದೇ ಇರುವವರೋ ಇದ್ದೀರಿ.; ಬುದ್ಧಿ ಕಲಿಯದಿದ್ರೆ ಹೋಗ್ಲಿ ಬಿಡಿ, ತಪ್ಪಂತೂ ಮಾಡಿದ್ದೀರಿ ಅಂತ ಅರಿತಿದ್ದೀರಿ ತಾನೆ?

ಮಾಡಿದ ತಪ್ಪನ್ನು ನೋಡಿಕೊಂಡು ಸುಮ್ಮನೇ ಇದ್ರೆ ಆವ್ರು ಮೇಷ್ಟ್ರಾಗೋಕೆ ಸಾಧ್ಯವೇ? ಹಾಗೇನಾದ್ರೂ ಇದ್ದಿದ್ರೆ ನಮ್‍ನೆಲ್ಲ ನಮ್ಮ ಅಪ್ಪ ಅಮ್ಮ ಶಾಲೆಗೆ ಯಾಕೆ ಕಳಿಸ್ತಾ ಇದ್ರು ಅಲ್ವಾ?

ಮನೇಲಿದ್ದ ನಮ್ಮ ಚೆಸ್ಟೆಯ ಹತೋಟಿಗೆ ತರಲಾಗದೇ ಒದ್ದಾಡೋ ಅಪ್ಪ ಅಮ್ಮ, ಹೋಗ್ಲಿ ಈ ಮಂಗ ನನ್ನ ಮಗನ ಬಾಲನ ಮೇಷ್ಟ್ರ ಕೈಗೆ ಕೊಟ್ರೆ ಒಂದಿಂಚಾದ್ರು ಕಡಿಮೆ ಮಾಡಿ ಮನುಷ್ಯ ಜನ್ಮವಾದ್ರೂ ಬರಬಹುದು ಅನ್ನೋ ನಂಬಿಕೆಯಿಂದಲೇ ತಾನೆ ನಮ್‍ನೆಲ್ಲ ಶಾಲೆಗೆ ಕಳಿಸೋದು?
ಹುಟ್ಟುವಾಗ ಎಲ್ಲ ಮಗುವೊ ಮಂಗವೆ, ಅದ್ರಲ್ಲಿ ಯಾವುದೇ ರೀತಿಯ ಅಪನಂಬಿಕೆ ಅಥವಾ ಸಂಶಯ ಇಲ್ಲವೇ ಇಲ್ಲ.. ಬಾಲ್ಯದಲ್ಲಿ ಮೇಷ್ಟ್ರು ಒದ್ದು ತಿದ್ದಿದ ನಂತರವೇ ನಮಗೆಲ್ಲ ಒಂದು ಸ್ಪಷ್ಟ ಮಾನವ ರೂಪ ಬರುವುದು..

ನಾನೂ ಶಾಲೆಗೆ ಹೋಗ್‌ಬೇಕಾದ್ರೆ ದಿನಾನು ಗಲಾಟೆ ಮಾಡುತ್ತಿದ್ದ ಭೂಪ. ಒಂದಿನ ಏನಾಯ್ತು ನೀವೇ ಕೇಳಿ. ಆರನೆ ತರಗತಿ, ಮುರಿದ ಮಾಡಿನ ಕಾನನ ಮಧ್ಯದ ದಪ್ಪ ಪಕಾಸಿಯ ಹಳ್ಳಿ ಶಾಲೆ.. ಉದ್ದನೆ ಬೆಂಚು ನಮಗೆಲ್ಲ ಕೂರೋಕೆ.. ನಮ್ಮ ಗೋಣಿಚೀಲದಂತ ಬ್ಯಾಗುಗಳನ್ನ ನೋಡಿದ ಮೇಷ್ಟ್ರು ಜಾಸ್ತಿ ಇದ್ದ ಬೆಂಚನ್ನ ಬ್ಯಾಗ್ ಇಡೋಕೆ ಅಂತ ತರಿಸಿಕೊಟ್ಟರು. ಎಲ್ಲ ಹುಡುಗ್ರೂ ಶಿಸ್ತಾಗಿ ಉತ್ಸೂಹರಾಗಿ ಬ್ಯಾಗುಗಳನ್ನ ಬೆಂಚ್ ಮೇಲಿಟ್ರೆ, "ವಜ್ರಮುನಿ, ಸುಧೀರ್" ನಂಥ ಚಾಲಿ ಬರಿಸೊ ಖಳ ನಾಯಕರ ಚಿತ್ರಗಳನ್ನ ನೋಡಿದ್ದ ನನಗೆ, ಬ್ಯಾಗ್ ನ ನೆಲಡ್ ಮೇಲಿಟ್ಟು ಕಾಲನ್ನ ಯಾಕೆ ಮೇಲೆ ಇಟ್ಕೊಬಾರದು ಎಂದು ಮನಸ್ಸಿಗೆ ಅನಿಸಿದ್ದು ಸಹಜವೇ.. (ಒಪ್ಪಿದಿರಿ ಅಲ್ವಾ. ಹಾಗೆ ಬನ್ನಿ ದಾರಿಗೆ..) ಮನಸ್ಸಿಗೆ ಅನ್ಸಿದ್ನೆಲ್ಲ ಮಾಡಿದ್ರೆ, ಪ್ರಪಂಚ ಕೇಳುತ್ತಾ? ಆದ್ರೆ ನಾ ಜಾಸ್ತಿ ಯೋಚ್ನೆ ಮಾಡ್ಲೆ ಇಲ್ಲ ಬಿಡ್ರಿ, ಬ್ಯಾಗ್ ನ ಕಾಲ್ ಕೆಳಗೆ ಹಾಕಿ, ಕಾಲನ್ನ ಮೇಲಕ್ಕೆ ಇಟ್ಟೆ ನೋಡಿ.. ಮುಂದೇನಾಯ್ತು?


ನನ್ನ ಕಂಡ್ರೆ ಮುದ್ದು ಮಾಡ್ತಾ ಇದ್ದ ರಾಮಸ್ವಾಮಿ ಮೇಷ್ಟ್ರು ಧಡಕ್ಕಂಥ ರಾಮಾವತಾರ ಬಿಟ್ಟು ನರಸಿಂಹಾವತಾರ ಆಗುವುದೇ.. ಮುಂದಿನ ಬೆಂಚಿನ ಹುಡುಗನ ಕರೆದು, ಹೋಗಿ ರೂಲರ್ ತಗೊಂಡ್ ಬಾರೋ ನಾಗ್ರಾಜ ಎಂದಾಗ, "ಬಿಡು, ನಂಗಲ್ಲ" ಅಂತ ಯೋಚನೆ ಮಾಡುತ್ತಿದ್ದ ನಂಗೆ, ರೂಲರ್ ಯದ್ವಾ ತದ್ವಾ ನನ್ನ ಹಣ್ಣುಗಾಯಿ ನೀರುಗಾಯಿ ಮಾಡಿದ ಮೇಲೆಯೇ ಬಾಹ್ಯ ಲೋಕದ ಪರಿಚಯ ಮಾಡಿದ್ದು..

ಇಷ್ಟೆಲ್ಲಾ ಯಾಕೆ ಹೇಳಿದೆ ಅಂದ್ರೆ, ಶಿಕ್ಷಣದಲ್ಲಿ ಶಿಕ್ಷೆಯೂ ಒಂದು ಬಹು ಮುಖ್ಯವಾದ ಭಾಗ. ಅದು ಸರಿಯಾದ ಸಮಯದಲ್ಲಿ ಉಪಯೋಗಿಸದಿದ್ದರೆ, ಮಕ್ಕಳಲ್ಲಿ ಸಹನೆ ಸಂಯಮದ ಮೊಳಕೆ ಮೂಡದು.

ಲಕ್ಷ ಲಕ್ಷ ಹಣ ಖರ್ಚು ಮಾಡಿಯೂ ಮಕ್ಕಳಿಗೆ ಒಳ್ಳೆಯ ಶಿಕ್ಷಣವ ಒದಗಿಸಲಾಗದ ಪೇಟೇ ಕಾನ್‌ವೆಂಟ್ ಗಳ ನಡುವೆ ಅದೆಷ್ಟೋ ಎಲೆ ಮರೆಯ ಕಾಯಿಯಂತೆ ಸಮೃದ್ಧಿಯ ಹಳ್ಳಿ ಶಾಲೆಗಳಿವೆ..
"ಹಾವೂ ಸಾಯಬಾರದು, ಕೋಲೂ ಮುರಿಯಕೂಡದು" ಎಂಬ ದ್ವಂದ್ವ ನೀತಿ ದಯವಿಟ್ಟು ಶಿಕ್ಷಣದಿಂದ ಹೊರಗಿಡಿ..



ಶಿಕ್ಷಿಸಿದರೇನು? ಮಕ್ಕಳು ಸುಶೀಕ್ಷಿತರಾಗಿ, ದೇಶ ಸುಭೀಕ್ಷೆಯಾದರೆ ಕೊಟ್ಟ ಶಿಕ್ಷೆಯೂ ಸಾರ್ಥಕವಲ್ಲವೆ?

2 comments: